ADVERTISEMENT

ರಣಜಿ ಕ್ರಿಕೆಟ್: ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಬಂಗಾಳ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2022, 13:16 IST
Last Updated 10 ಜೂನ್ 2022, 13:16 IST
ಮನೋಜ್‌ ತಿವಾರಿ
ಮನೋಜ್‌ ತಿವಾರಿ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಕ್ರಿಕೆಟಿಗ ಮನೋಜ್‌ ತಿವಾರಿ ಅವರುಜಾರ್ಖಂಡ್ ವಿರುದ್ಧ ಇಂದು ಮುಕ್ತಾಯವಾದ ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದರು.

ಸೋಮವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಂಗಾಳ ತಂಡ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 773 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. 9 ಬ್ಯಾಟರ್‌ಗಳು ಅರ್ಧಶತಕ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದರು.

ನಂತರ ಬಂಗಾಳದ ಬೃಹತ್‌ ಮೊತ್ತಕ್ಕೆ ಪ್ರತಿಯಾಗಿ ಜಾರ್ಖಂಡ್, 298 ರನ್‌ ಗಳಿಸಿ ಆಲೌಟ್‌ ಆಗಿತ್ತು.

ADVERTISEMENT

475 ರನ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಶುರುಮಾಡಿದ ಬಂಗಾಳ ತಂಡದ ಮೊತ್ತ 4 ವಿಕೆಟ್‌ಗೆ 129ರನ್ ಆಗಿದ್ದಾಗ ಕ್ರೀಸ್‌ಗೆ ಬಂದ ತಿವಾರಿ, 185 ಎಸೆತಗಳಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 136 ರನ್ ಗಳಿಸಿದರು. ಇದರೊಂದಿಗೆ 7 ವಿಕೆಟ್‌ ನಷ್ಟಕ್ಕೆ 318 ರನ್‌ ಗಳಿಸಿತು.

ಈ ಪಂದ್ಯವು ಡ್ರಾನಲ್ಲಿ ಮುಕ್ತಾಯವಾಗಿದೆ. ಆದರೆ, ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಬಂಗಾಳ ಪಡೆ ಮುಂಬೈ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ತಂಡಗಳ ಜೊತೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಸೆಮಿಫೈನಲ್‌ ಪಂದ್ಯಗಳು ಜೂನ್‌ 14 ರಿಂದ 18ರ ವರೆಗೆ ನಡೆಯಲಿದ್ದು,ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಬಂಗಾಳಹಾಗೂ ಮಧ್ಯಪ್ರದೇಶ ಹಾಗೂ ಜಸ್ಟ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮುಂಬೈ ಹಾಗೂ ಉತ್ತರ ಪ್ರದೇಶ ತಂಡಗಳು ಸೆಣಸಲಿವೆ. ಫೈನಲ್‌ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 22ರಿಂದ 26ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.