ಪರ್ತ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ‘ಸೂಪರ್ 12’ ಹಂತದ ಪಂದ್ಯದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳು ಗೆಲುವಿಗಾಗಿ ಹೋರಾಟ ನಡೆಸುತ್ತಿವೆ.
ಪರ್ತ್ನ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಪಾಕಿಸ್ತಾನ ಹಾಗೂ ಜಿಂಬಾಬ್ವೆ ವಿರುದ್ಧ ಆಡಿದ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧವೂ ಗೆಲುವಿನ ಓಟ ಮುಂದುವರಿಸುವ ಹುಮ್ಮಸ್ಸಿನಲ್ಲಿದೆ.
ಈ ಎರಡೂ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಸೋಲಿನ ಮುಖ ನೋಡಿಲ್ಲ. ಈ ಪಂದ್ಯದ ಫಲಿತಾಂಶವು ಪಾಕಿಸ್ತಾನ ತಂಡದ ಸೆಮಿಫೈನಲ್ ಅವಕಾಶದ ಮೇಲೆ ಪರಿಣಾಮ ಬೀರಲಿದೆ. ಆಡಿರುವ ಎರಡೂ ಪಂದ್ಯಗಳಲ್ಲಿ ಬಾಬರ್ ಆಜಂ ಬಳಗ ಸೋತಿದೆ. ಒಂದೊಮ್ಮೆ ದಕ್ಷಿಣ ಆಫ್ರಿಕಾವು ಭಾರತ ವಿರುದ್ಧ ಸೋತರೆ, ಪಾಕ್ ತಂಡಕ್ಕೆ ಅವಕಾಶ ಜೀವಂತವಾಗುಳಿಯಲಿದೆ.
ಆದರೆ, ಸಮತೋಲನವಾಗಿರುವ ತಂಡವನ್ನು ಸೋಲಿಸುವುದು ಭಾರತಕ್ಕೆ ಸುಲಭವಲ್ಲ. ಅನುಭವಿ ವೇಗಿ ಕಗಿಸೊ ರಬಾಡ, ಎನ್ರಿಚ್ ನಾಕಿಯಾ ಹಾಗೂ ವೇಯ್ನ್ ಪಾರ್ನೆಲ್ ಅವರ ಬೌಲಿಂಗ್ ಎದುರು ಭಾರತದ ಬ್ಯಾಟಿಂಗ್ ಪಡೆ ದಿಟ್ಟತನದಿಂದ ಆಡಬೇಕು. ಆರಂಭಿಕ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ಬಿಟ್ಟರೆ ಉಳಿದ ಬ್ಯಾಟರ್ಗಳು ಅಮೋಘ ಲಯದಲ್ಲಿದ್ದಾರೆ. ರಾಹುಲ್ ತಮ್ಮ ಮೇಲೆ ಅವರಿಸಿರುವ ವೈಫಲ್ಯದ ಕಾರ್ಮೋಡವನ್ನು ಚದುರಿಸುವಂತಹ ಆಟವಾಡಲು ಕಾದಿದ್ದಾರೆ. ವಿರಾಟ್, ಸೂರ್ಯಕುಮಾರ್ ಹಾಗೂ ರೋಹಿತ್ ಉತ್ತಮ ಫಾರ್ಮ್ನಲ್ಲಿದ್ದಾರೆ.
ಅಕ್ಷರ್ ಪಟೇಲ್ ಬದಲು ದೀಪಕ್ ಹೂಡಾ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಉಳಿದಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ತಂಡಗಳು ಇಂತಿವೆ:
ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಆರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್
ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್, ರಿಲೀ ರೋಸೊ, ಏಡನ್ ಮರ್ಕರಂ, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ, ಕಗಿಸೊ ರಬಾಡ, ಲುಂಗಿ ಗಿಡಿ, ಎನ್ರಿಚ್ ನಾಕಿಯಾ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.