ADVERTISEMENT

IND VS PAK- ಪಾಕ್ ಆಟಗಾರರು ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದು ಏಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2022, 16:11 IST
Last Updated 28 ಆಗಸ್ಟ್ 2022, 16:11 IST
   

ದುಬೈ: ದುಬೈನಲ್ಲಿ ನಡೆಯುತ್ತಿರುವ ಭಾರತ-ಪಾಕ್ ಏಷ್ಯಾ ಕಪ್ ಟ್ವೆಂಟಿ–ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಆಡಿರುವುದುಗಮನ ಸೆಳೆಯಿತು. ಈ ಕುರಿತು ಅನೇಕರು ಗೊಂದಲಕ್ಕೆ ಒಳಗಾಗಿದ್ದರು.

ನಂತರ ಪಾಕ್ ಕ್ರಿಕೆಟ್ ಬೋರ್ಡ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಾಕ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮಡಿದವರಿಗಾಗಿ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿಆಟಗಾರರು ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದ್ದಾರೆ ಎಂದು ತಿಳಿಸಿದೆ.

ಪಾಕಿಸ್ತಾನದಲ್ಲಿ ಜೂನ್‌ನಿಂದ ಇಲ್ಲಿಯ ವರೆಗೆ ಮಾನ್ಸೂನ್ ಪ್ರವಾಹದಲ್ಲಿ 1,033 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಭಾನುವಾರ ಬಿಡುಗಡೆ ಮಾಡಿದ ಅಂಕಿಅಂಶಗಳಿಂದ ಗೊತ್ತಾಗಿದೆ.

ADVERTISEMENT

ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, 119 ಜನರು ಮೃತಪಟ್ಟಿದ್ದಾರೆ ಎಂದು ಪ್ರಾಧಿಕಾರ ಹೇಳಿದೆ.

ಭಾರತ ಉಪಖಂಡದಾದ್ಯಂತ ಬೆಳೆಗಳಿಗೆ ನೀರಾವರಿ ಕಲ್ಪಿಸಲು, ಸರೋವರಗಳು ಮತ್ತು ಅಣೆಕಟ್ಟುಗಳನ್ನು ಮರುಪೂರಣಗೊಳಿಸಲು ವಾರ್ಷಿಕ ಮಾನ್ಸೂನ್ ಅತ್ಯಗತ್ಯ. ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಮಾನ್ಸೂನ್‌ ಅವಾಂತರ ಸೃಷ್ಟಿಸುತ್ತಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಭಾನುವಾರ ವರದಿ ಮಾಡಿದೆ.

ಈ ವರ್ಷದ ಮಾನ್ಸೂನ್ ಪ್ರವಾಹವು 3.3 ಕೋಟಿಗೂ ಹೆಚ್ಚು ಜನರ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಪ್ರವಾಹದಲ್ಲಿ ಪಾಕಿಸ್ತಾನದ ಪ್ರತಿ ಏಳು ಮಂದಿಯಲ್ಲಿ ಒಬ್ಬರಿಗೆಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಾಕಿಸ್ತಾನದ 20 ಲಕ್ಷ ಎಕರೆಗೂ ಹೆಚ್ಚು ಕೃಷಿ ಬೆಳೆಗಳು ನಾಶವಾಗಿವೆ. 3,451 ಕಿಲೋಮೀಟರ್ (2,150 ಮೈಲುಗಳು) ರಸ್ತೆಗಳು ನಾಶವಾಗಿವೆ. 149 ಸೇತುವೆಗಳು ಕೊಚ್ಚಿಹೋಗಿವೆ ಎಂದು ಎನ್‌ಡಿಎಂಎ ತಿಳಿಸಿದೆ.

ಇನ್ನು 9 ವಿಕೆಟ್ ನಷ್ಟಕ್ಕೆ ಪಾಕ್ ಆಟಗಾರರು ಭಾರತ ತಂಡದ ವಿರುದ್ಧ 139 ರನ್ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.