ಯುವರಾಜ್ ಸಿಂಗ್ ಬ್ಯಾಟಿಂಗ್
–ಐಎಂಎಲ್ ಎಕ್ಸ್ ಚಿತ್ರ
ರಾಯಪುರ: ಇಂಡಿಯಾ ಮಾಸ್ಟರ್ಸ್ ತಂಡವು ಶನಿವಾರ ಇಂಟರ್ನ್ಯಾಷನಲ್ ಮಾಸ್ಟರ್ ಲೀಗ್ (ಐಎಂಎಲ್) ಕ್ರಿಕೆಟ್ ಟೂರ್ನಿಯ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವನ್ನು ಏಳು ರನ್ಗಳಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ತಂಡವು 20 ಓವರ್ಗಳಲ್ಲಿ 3 ವಿಕೆಟ್ಗೆ 253 ರನ್ ಗಳಿಸಿತು. ಸೌರಭ್ ತಿವಾರಿ (60;37ಎ) ಅಂಬಟಿ ರಾಯುಡು (63;35ಎ), ಗುರ್ಕೀರತ್ ಸಿಂಗ್ (46;21ಎ) ಮತ್ತು ನಾಯಕ ಯುವರಾಜ್ ಸಿಂಗ್ (ಔಟಾಗದೇ 49;20ಎ) ಅವರು ಬ್ಯಾಟಿಂಗ್ನಲ್ಲಿ ಅಬ್ಬರಿಸಿದರು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ವೆಸ್ಟ್ಇಂಡೀಸ್ ತಂಡವು 6 ವಿಕೆಟ್ಗೆ 246 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಡ್ವೇನ್ ಸ್ಮಿತ್ (79;34ಎ) ಮತ್ತು ವಿಲಿಯಂ ಪರ್ಕಿನ್ಸ್ (54;24ಎ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 121 ರನ್ ಸೇರಿಸಿ ಉತ್ತಮ ಅಡಿಪಾಯ ಹಾಕಿದ್ದರು. ಆದರೆ, ನಂತರ ಬಂದವರು ನಿರಾಸೆ ಮೂಡಿಸಿದರು. ಸ್ಟುವರ್ಟ್ ಬಿನ್ನಿ ಮೂರು ವಿಕೆಟ್ ಪಡೆದರೆ, ಪವನ್ ನೇಗಿ ಎರಡು ವಿಕೆಟ್ ಕಬಳಿಸಿದರು.
ಈ ಪಂದ್ಯಕ್ಕೆ ಇಂಡಿಯಾ ಮಾಸ್ಟರ್ಸ್ನ ನಾಯಕ ಸಚಿನ್ ತೆಂಡೂಲ್ಕರ್ ವಿಶ್ರಾಂತಿ ಪಡೆದಿದ್ದರು. ಹೀಗಾಗಿ, ಯುವರಾಜ್ ಸಿಂಗ್ ತಂಡವನ್ನು ಮುನ್ನಡೆಸಿದರು. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯ ಗೆದ್ದ ಭಾರತ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.
ಇಂಡಿಯಾ ಮಾಸ್ಟರ್ಸ್: 20 ಓವರ್ಗಳಲ್ಲಿ 3ಕ್ಕೆ 253 (ಅಂಬಟಿ ರಾಯುಡು 63, ಸೌರಭ್ ತಿವಾರಿ 60, ಯುವರಾಜ್ ಸಿಂಗ್ ಔಟಾಗದೇ 49, ಗುರ್ಕೀರತ್ ಸಿಂಗ್ 46).
ವೆಸ್ಟ್ಇಂಡೀಸ್ ಮಾಸ್ಟರ್ಸ್: 20 ಓವರ್ಗಳಲ್ಲಿ 6ಕ್ಕೆ 246 (ಡ್ವೇನ್ ಸ್ಮಿತ್ 79, ವಿಲಿಯಂ ಪರ್ಕಿನ್ಸ್ 54; ಸ್ಟುವರ್ಟ್ ಬಿನ್ನಿ 13ಕ್ಕೆ 3, ಪವನ್ ನೇಗಿ 27ಕ್ಕೆ 2). ಫಲಿತಾಂಶ: ಇಂಡಿಯಾ ಮಾಸ್ಟರ್ಸ್ಗೆ 7 ವಿಕೆಟ್ ಜಯ. ಪಂದ್ಯದ ಆಟಗಾರ: ಸ್ಟುವರ್ಟ್ ಬಿನ್ನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.