ADVERTISEMENT

IND vs SA T20I: ಭಾರತದ ವಿರುದ್ಧ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬೌಲಿಂಗ್ ಆಯ್ಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜೂನ್ 2022, 13:32 IST
Last Updated 17 ಜೂನ್ 2022, 13:32 IST
   

ರಾಜ್‌ಕೋಟ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟಿ20 ಕ್ರಿಕೆಟ್ ಸರಣಿ ಈಗ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಶುಕ್ರವಾರ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟಿ–20 ಪಂದ್ಯದಲ್ಲಿ ಟಾಸ್‌ ಗೆದ್ದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ತಂಡಕ್ಕೆ ಸರಣಿ ಜಯದ ಕನಸು ಜೀವಂತವಾಗುಳಿಯಬೇಕಾದರೆ, ರಿಷಭ್ ಪಂತ್ ಬಳಗವು ಈ ಪಂದ್ಯ ಜಯಿಸಲೇಬೇಕಿದೆ. ಆದರೆ, ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗೆದ್ದಿರುವ ದಕ್ಷಿಣ ಆಫ್ರಿಕಾ ತಂಡವು ಮೂರನೇ ಪಂದ್ಯದಲ್ಲಿ ಸೋತಿತ್ತು. ಭಾರತವು ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿದರೆ, ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಕೊನೆಯ ಪಂದ್ಯವು ಕುತೂಹಲದ ಕಣಜವಾಗುವುದು ಖಚಿತ.

ಇತ್ತ 2–1ರಿಂದ ಮುಂದಿರುವ ತೆಂಬಾ ಬವುಮಾ ಬಳಗವೂ ರಾಜ್‌ಕೋಟ್‌ನಲ್ಲಿಯೇ ಜಯಿಸಿ ಸರಣಿ ಕಿರೀಟ ಧರಿಸುವ ವಿಶ್ವಾಸದಲ್ಲಿದೆ.

ADVERTISEMENT

ವಿಶಾಖಪಟ್ಟಣದಲ್ಲಿ ಮೂರು ದಿನಗಳ ಹಿಂದೆ ನಡೆದಿದ್ದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಆಲ್‌ರೌಂಡ್ ಸಾಮರ್ಥ್ಯ ಮೆರೆದಿತ್ತು. ಆರಂಭಿಕ ಜೋಡಿ ಋತುರಾಜ್ ಗಾಯಕವಾಡ ಮತ್ತು ಇಶಾನ್ ಕಿಶನ್ ಅವರು ತಲಾ ಒಂದು ಅರ್ಧಶತಕ ಹೊಡೆದು ಉತ್ತಮ ಅಡಿಪಾಯ ಹಾಕಿದ್ದರು. ಮಧ್ಯಮವೇಗಿ ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಬ್ಬರೂ ಚಾಣಾಕ್ಷ ಬೌಲಿಂಗ್‌ನಿಂದ ದಕ್ಷಿಣ ಆಫ್ರಿಕಾದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದರು.

ತಂಡಗಳು: ಭಾರತ: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್, ಆವೇಶ್ ಖಾನ್

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ರಸಿ ವ್ಯಾನ್ ಡರ್ ಡಸೆ, ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಡ್ವೇನ್ ಪ್ರಿಟೊರಿಯಸ್, ಕೇಶವ್ ಮಹಾರಾಜ, ಮಾರ್ಕೊ ಜಾನ್ಸೆನ್, ಲುಂಗಿ ಗಿಡಿ, ತಬ್ರೇಜ್ ಶಮ್ಸಿ, ಎನ್ರಿಚ್ ನಾಕಿಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.