ಟೂರ್ನಿಯ ಮಧ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿದ ಕೋಲ್ಕತ್ತ ನೈಟ್ರೈಡರ್ಸ್ ಕ್ರಮ ಸರಿಯಾದುದಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಕೆಕೆಆರ್ ನಾಯಕರಾಗಿದ್ದ ದಿನೇಶ್ ಕಾರ್ತಿಕ್ಅವರು ಕಳೆದವಾರ ನಾಯಕತ್ವದಿಂದ ಕೆಳಗಿಳಿದಿದ್ದರು, ಹಾಗಾಗಿ ಆ ಸ್ಥಾನಕ್ಕೆ ಇಂಗ್ಲೆಂಡ್ ತಂಡದ ನಾಯಕ ಎಯಾನ್ ಮಾರ್ಗನ್ ಅವರನ್ನು ನೇಮಿಸಲಾಗಿತ್ತು. ನಾಯಕತ್ವ ಬದಲಾವಣೆಯಾದ ದಿನವೇ (ಅ.16) ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಿದ್ದ ಕೆಕೆಆರ್, 8 ವಿಕೆಟ್ ಅಂತರದ ಸೋಲು ಅನುಭವಿಸಿತ್ತು. ಆದರೆ, ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ನಂತರದ ಪಂದ್ಯದಲ್ಲಿ ಜಯದ ಹಾದಿಗೆ ಮರಳಿತ್ತು.
ಆದಾಗ್ಯೂ ಟೂರ್ನಿಯ ಮಧ್ಯೆ ನಾಯಕತ್ವದಲ್ಲಾದ ಬದಲಾವಣೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಇದೀಗ ಅಜಿತ್ ಅಗರ್ಕರ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ರೀಡಾವಾಹಿನಿ ಸ್ಟಾರ್ಸ್ಪೋರ್ಟ್ನಲ್ಲಿ ಮಾತನಾಡಿರುವ ಅಗರ್ಕರ್, ‘7 ಪಂದ್ಯಗಳ ಆಟ ಮುಕ್ತಾಯವಾಗಿ, ನಿಮ್ಮ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾಗ ನಾಯಕತ್ವ ಬದಲಾವಣೆ ಮಾಡುವುದು ಸರಿಯಾದ ಕ್ರಮ ಎಂದು ನನಗನಿಸುವುದಿಲ್ಲ. ಇದರಿಂದ ತಂಡದ ಮೇಲೆ ಮತ್ತಷ್ಟು ಹೊರೆ ಹೆಚ್ಚಾಗುತ್ತದೆ’
‘ನೀವು ಒಬ್ಬ ನಾಯಕನೊಂದಿಗೆ ಸಾಕಷ್ಟು ಚರ್ಚೆ ನಡೆಸಿ ಯೋಜನೆಗಳನ್ನು ಸಿದ್ಧಪಡಿಸಿರುತ್ತೀರಿ. ತಂಡ ನಾಲ್ಕನೇ ಸ್ಥಾನದಲ್ಲಿದ್ದಾಗ ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ವಿಚಿತ್ರ ಎನಿಸುತ್ತದೆ’ ಎಂದು ಹೇಳಿದ್ದಾರೆ.
ಕೆಕೆಆರ್ ತಂಡ ಬುಧವಾರ ರಾಯಲ್ ಚಾಲೆಂಜರ್ಸ್ ವಿರುದ್ಧ ಕಣಕ್ಕಿಳಿಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.