ADVERTISEMENT

IPL 2021: ಆರ್‌ಸಿಬಿ ಬ್ಯಾಟಿಂಗ್ ಸಲಹೆಗಾರನಾಗಿ ಸಂಜಯ್ ಬಂಗಾರ್ ನೇಮಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಫೆಬ್ರುವರಿ 2021, 8:55 IST
Last Updated 10 ಫೆಬ್ರುವರಿ 2021, 8:55 IST
ಸಂಜಯ್ ಬಂಗಾರ್
ಸಂಜಯ್ ಬಂಗಾರ್   

ಬೆಂಗಳೂರು: ಮುಂಬರುವ ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಕಿರೀಟ ಎದುರು ನೋಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು, ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಬ್ಯಾಟಿಂಗ್ ಸಲಹೆಗಾರನಾಗಿ ನೇಮಕಗೊಳಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಆರ್‌ಸಿಬಿ, ಬ್ಯಾಟಿಂಗ್ ಸಲಹೆಗಾರನಾಗಿ ಸಂಜಯ್ ಬಂಗಾರ್ ಅವರನ್ನು ಆರ್‌ಸಿಬಿ ಕುಟುಂಬಕ್ಕೆ ಸ್ವಾಗತಿಸಲು ಅತೀವ ಸಂತೋಷಪಡುತ್ತಿದ್ದೇವೆ ಎಂದು ತಿಳಿಸಿದೆ.

2014ನೇ ಸಾಲಿನಲ್ಲಿ ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿನೇಮಕಗೊಂಡಿದ್ದ ಸಂಜಯ್ ಬಂಗಾರ್, 2019ರ ವರೆಗೆ ಸುದೀರ್ಘ ಐದು ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಅವರ ಸ್ಥಾನಕ್ಕೆ ವಿಕ್ರಂ ರಾಥೋಡ್ ಆಯ್ಕೆಯಾಗಿದ್ದರು.

ADVERTISEMENT

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹಾಯಕ ಕೋಚ್ ಆಗಿಯೂ ಬಂಗಾರ್ ಹೆಚ್ಚಿನ ಯಶಸ್ಸು ಗಳಿಸಿದ್ದರು.

ಆರ್‌ಸಿಬಿ ಕೋಚಿಂಗ್ ಪ್ಯಾನೆಲ್‌ನಲ್ಲಿಡೈರಕ್ಟರ್ ಮೈಕ್ ಹೆಸ್ಸನ್ ಮುಂದಾಳತ್ವದಲ್ಲಿ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಜೊತೆಗೆ ಸಂಜಯ್ ಬಂಗಾರ್, ಮುಂಬರುವ ಐಪಿಎಲ್ ಹರಾಜಿಗಾಗಿ ಯೋಜನೆ ರೂಪಿಸಲಿದ್ದಾರೆ.

ಹರಾಜಿಗೂ ಮೊದಲು ಆ್ಯರೋನ್ ಫಿಂಚ್ ಸೇರಿದಂತೆ 10 ಆಟಗಾರರನ್ನು ಬಿಡುಗಡೆಗೊಳಿಸಿರುವ ಆರ್‌ಸಿಬಿ, 35.7 ಕೋಟಿ ರೂ.ಗಳ ಪರ್ಸ್ ಉಳಿಸಿಕೊಂಡಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡವು ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ. ಅಂದ ಹಾಗೆ ಐಪಿಎಲ್ ಹರಾಜು ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.