ADVERTISEMENT

ಆರ್‌ಸಿಬಿ ವಿರುದ್ಧದ ಮ್ಯಾಚ್ ರೋಹಿತ್ ಪಾಲಿಗೆ ಬರಿ ಪಂದ್ಯ ಮಾತ್ರ ಆಗಿರಲಿಲ್ಲ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2021, 11:53 IST
Last Updated 10 ಏಪ್ರಿಲ್ 2021, 11:53 IST
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ
ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ   

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಏಪ್ರಿಲ್ 9 ಶುಕ್ರವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡವು ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ಆದರೆ ಈ ಪಂದ್ಯವು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಪಾಲಿಗೆ ಎಂದಿನಂತೆ ಬರಿ ಒಂದು ಪಂದ್ಯ ಮಾತ್ರವಾಗಿರಲಿಲ್ಲ.

ಅಳಿವಿನಂಚಿನಲ್ಲಿರುವ ಖಡ್ಗಮೃಗಗಳ ರಕ್ಷಣೆಯನ್ನು ಬೆಂಬಲಿಸುತ್ತಲೇ ಬಂದಿರುವ ರೋಹಿತ್ ಶರ್ಮಾ, ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ವಿಶೇಷವಾದ ಸಂದೇಶವನ್ನು ರವಾನಿಸಿದ್ದರು. ಇದಕ್ಕಾಗಿ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಿದ ಶೂಗಳನ್ನು ಧರಿಸಿದ್ದರು. ಅಲ್ಲದೆ 'ಸೇವ್ ದಿ ರೈನೋ' (ಖಡ್ಗಮೃಗಗಳನ್ನು ಉಳಿಸಿ) ಎಂಬ ಸಂದೇಶವನ್ನುಸಾರಿದ್ದರು.

'ಗ್ರೇಟ್ ಒನ್-ಹಾರ್ನ್ಡ್ ರೈನೋಸರ್ಸ್' ಅಥವಾ 'ಇಂಡಿಯನ್ ರೈನೋ' ರಕ್ಷಣೆಗಾಗಿ ರೋಹಿತ್ ಶರ್ಮಾ ಪಣತೊಟ್ಟಿದ್ದಾರೆ. ಈ ಮೂಲಕ ಖಡ್ಗಮೃಗಗಳ ರಕ್ಷಣೆಗಾಗಿ ಬ್ಯಾಟಿಂಗ್ ಮಾಡುವ ಮೂಲಕ ಹೃದಯ ಗೆದ್ದಿದ್ದಾರೆ.

ಖಡ್ಗಮೃಗ ರಕ್ಷಣೆಗಾಗಿ ಸಂದೇಶ ಸಾರಿದ ರೋಹಿತ್ ಶರ್ಮಾ

ಈ ಕುರಿತು ಟ್ವೀಟ್ ಮಾಡಿರುವ ರೋಹಿತ್, 'ನಿನ್ನೆ (ಏ.9) ನಾನು ಮೈದಾನಕ್ಕೆ ಕಾಲಿಟ್ಟಾಗ ನನ್ನ ಪಾಲಿಗದು ಒಂದು ಪಂದ್ಯಕ್ಕಿಂತ ಮಿಗಿಲಾಗಿತ್ತು. ಕ್ರಿಕೆಟ್ ಆಡುವುದು ನನ್ನ ಕನಸು ಮತ್ತು ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಪರಿವರ್ತಿಸಲು ಸಹಾಯ ಮಾಡುವುದರತ್ತ ನಾವೆಲ್ಲರೂ ಕೆಲಸ ಮಾಡಬೇಕಿದೆ' ಎಂದಿದ್ದಾರೆ.

'ನಾನು ಇಷ್ಟಪಡುವುದನ್ನು ಮಾಡುವಾಗ ಮೈದಾನದಲ್ಲಿ ನನ್ನೊಂದಿಗೆ ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಕಾರಣವನ್ನು ತೆಗೆದುಕೊಳ್ಳುವುದು ನನ್ನ ಪಾಲಿಗೆ ವಿಶೇಷವೆನಿಸಿತ್ತು. ಪ್ರತಿಯೊಂದು ಹೆಜ್ಜೆವೂ ಮುಖ್ಯವೆನಿಸುತ್ತದೆ' ಎಂದು ಉಲ್ಲೇಖಿಸಿದ್ದಾರೆ.

ಭಾರತದ ಖಡ್ಗಮೃಗ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಅಸ್ತಿತ್ವದ ಭೀತಿಯಲ್ಲಿದೆ. ಇದು ಅಳಿವಿನಂಚಿನಲ್ಲಿರುವ ಪ್ರಭೇದಗಳ ರಕ್ಷಣೆಗಾಗಿ ಖಂಡಿತವಾಗಿಯೂ ಜನರನ್ನು ಜಾಗೃತಗೊಳಿಸುವ ನಿರೀಕ್ಷೆಯನ್ನು ರೋಹಿತ್ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.