ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಗುಜರಾತ್ ಟೈಟನ್ಸ್ ಟಾಸ್ ಗೆದ್ದು, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಎಂಸಿಎ ಕ್ರೀಡಾಂಗಣದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ನಾಯಕತ್ವದ ತಂಡಗಳು ಮುಖಾಮುಖಿಯಾಗಿವೆ. ಎರಡೂ ತಂಡಗಳು ಈ ಟೂರ್ನಿಯಲ್ಲಿ ಎರಡನೇ ಬಾರಿಗೆ ಎದುರಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿತ್ತು. ಇವತ್ತು ಗೆಲ್ಲುವ ತಂಡವು ಪ್ಲೇಆಫ್ಗೆ ಅರ್ಹತೆ ಪಡೆಯಲಿರುವ ಮೊದಲ ತಂಡವಾಗಲಿದೆ.
ಗುಜರಾತ್ ಮತ್ತು ಲಖನೌ ಎರಡೂ ತಂಡಗಳು ಈ ಕ್ರೀಡಾಂಗಣದಲ್ಲಿ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇಲ್ಲಿ ನಡೆದಿರುವ 11 ಪಂದ್ಯಗಳ ಪೈಕಿ ಮೊದಲು ಬ್ಯಾಟಿಂಗ್ ನಡೆಸಿರುವ ತಂಡಗಳು ಒಟ್ಟು 8 ಬಾರಿ ಗೆಲುವು ಸಾಧಿಸಿವೆ.
ಗುಜರಾತ್ ಟೈಟನ್ಸ್ ತಂಡದಲ್ಲಿ ಮೂರು ಬದಲಾವಣೆ ಮಾಡಲಾಗಿದೆ. ಸಾಯಿ ಸುದರ್ಶನ್ ಬದಲು ಸಾಯಿ ಕಿಶೋರ್ ಅವಕಾಶ ಪಡೆದಿದ್ದಾರೆ. ಅವರಿಗೆ ಇದು ಚೊಚ್ಚಲ ಪಂದ್ಯವಾಗಿದೆ. ಸಂಗ್ವಾನ್ ಬದಲು ಯಶ್ ದಯಾಳ್ ಹಾಗೂ ವೇಡ್ ಕಣಕ್ಕಿಳಿಯಲಿದ್ದಾರೆ.
ಲಖನೌ ತಂಡದಲ್ಲಿ ರವಿ ಬಿಷ್ಣೋಯಿ ಸ್ಥಾನಕ್ಕೆ ಕರಣ್ ಶರ್ಮಾ ಅವರನ್ನು ಆಡಿಸಲಾಗುತ್ತಿದೆ.
ಗುಜರಾತ್ ಟೈಟನ್ಸ್
ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ಮ್ಯಾಥ್ಯು ವೇಡ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜರಿ ಜೋಸೆಫ್, ಆರ್.ಸಾಯಿ ಕಿಶೋರ್, ಯಶ್ ದಯಾಳ್, ಮೊಹಮ್ಮದ್ ಶಮಿ.
ಲಖನೌ ಸೂಪರ್ ಜೈಂಟ್ಸ್
ಕೆ.ಎಲ್.ರಾಹುಲ್, ಕೃಣಾಲ್ ಪಾಂಡ್ಯ, ದೀಪಕ್ ಹೂಡಾ, ಜೇಸನ್ ಹೋಲ್ಡರ್, ಕ್ವಿಂಟನ್ ಡಿಕಾಕ್, ಮಾರ್ಕಸ್ ಸ್ಟೋಯಿನಿಸ್, ಆಯುಷ್ ಬಡೋಣಿ, ಕರಣ್ ಶರ್ಮಾ, ಮೊಹಸಿನ್ ಖಾನ್, ಆವೇಶ್ ಖಾನ್, ದುಷ್ಮತ್ ಚಮೀರ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.