ADVERTISEMENT

ಮುಂಬೈ ಇಂಡಿಯನ್ಸ್ ಪರಿವರ್ತನೆಯ ಹಾದಿಯಲ್ಲಿದೆ ಎಂದ ಬೂಮ್ರಾ: ಕಾರಣವೇನು?

ಪಿಟಿಐ
Published 12 ಏಪ್ರಿಲ್ 2022, 12:27 IST
Last Updated 12 ಏಪ್ರಿಲ್ 2022, 12:27 IST
ಜಸ್‌ಪ್ರೀತ್ ಬೂಮ್ರಾ - ಪಿಟಿಐ ಚಿತ್ರ
ಜಸ್‌ಪ್ರೀತ್ ಬೂಮ್ರಾ - ಪಿಟಿಐ ಚಿತ್ರ   

ಪುಣೆ: ‘ನಮ್ಮ ತಂಡವು ಪರಿವರ್ತನೆಯ ಹಾದಿಯಲ್ಲಿದೆ’ ಎಂದು ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮಂಗಳವಾರ ಹೇಳಿದ್ದಾರೆ.

ನಮ್ಮ ತಂಡದ ಹೊಸ ಆಟಗಾರರು ಐಪಿಎಲ್‌ನಂಥ ಟೂರ್ನಿಯಲ್ಲಿ ಒತ್ತಡವನ್ನು ನಿಭಾಯಿಸುವುದು ಹೇಗೆಂಬುದನ್ನು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಬೂಮ್ರಾ, ತಂಡದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಐದು ಬಾರಿಯ ಚಾಂಪಿಯನ್ ತಂಡ ಮುಂಬೈ ಈ ಬಾರಿ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ.

‘ಇದು ಎಲ್ಲ ಕ್ರಿಕೆಟಿಗರೂ ಅರ್ಥ ಮಾಡಿಕೊಂಡಿರುವಂತೆ ಪರಿವರ್ತನೆಯ ಹಂತ. ಎಲ್ಲ ತಂಡಗಳೂ ಈ ಹಂತವನ್ನು ಎದುರಿಸಬೇಕಾಗುತ್ತದೆ. ನಾವೀಗ ಆ ಹಂತದಲ್ಲಿದ್ದೇವೆ. ನಮ್ಮದು ಹೊಸ ತಂಡ’ ಎಂದು ಬೂಮ್ರಾ ಹೇಳಿದ್ದಾರೆ.

‘ಐಪಿಎಲ್ ಮಾದರಿಯನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ಟೂರ್ನಿಯಲ್ಲಿ ಹೇಗೆ ಒತ್ತಡವನ್ನು ನಿಭಾಯಿಸುತ್ತೇವೆ ಮತ್ತು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವೀಗ ಆ ಹಂತದಲ್ಲಿದ್ದೇವೆ. ಈ ಹಂತವನ್ನು ದಾಟಿ ಮುಂದುವರಿಯುವ ಬಗ್ಗೆ ನಾವು ಎದುರುನೋಡುತ್ತಿದ್ದೇವೆ. ಗುಣಮಟ್ಟದ ಆಟ ಆಡಬಲ್ಲ ಆಟಗಾರರು ನಮ್ಮಲ್ಲಿದ್ದಾರೆ. ಮರಳಿ ಉತ್ತಮ ಪ್ರದರ್ಶನ ನೀಡಲಿದ್ದೇವೆ’ ಎಂದು ಬೂಮ್ರಾ ಹೇಳಿದ್ದಾರೆ.

‘ಟೂರ್ನಿಯಲ್ಲಿ ಈವರೆಗೆ ನಾವಂದುಕೊಂಡಂತೆ ನಡೆದಿಲ್ಲ. ಸದ್ಯ ನಾವು ವರ್ತಮಾನದಲ್ಲಿ ಬದುಕಬೇಕಿದೆ. ನಾವು ಸದಾ ಹೋರಾಡುತ್ತಾ, ದಾರಿ ಹುಡುಕುತ್ತಾ ಇರುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಆಡಿರುವ ಎಲ್ಲ ಪಂದ್ಯಗಳನ್ನು ಸೋತಿರುವ ಮುಂಬೈ, ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಕೊನೆಯ ಸ್ಥಾನದಲ್ಲಿ ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.