ADVERTISEMENT

ಐಪಿಎಲ್–2022 | ಸಿಎಸ್‌ಕೆ ನಾಯಕತ್ವಕ್ಕೆ ಧೋನಿ ವಿದಾಯ: ‌ಕೊಹ್ಲಿ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಮಾರ್ಚ್ 2022, 14:29 IST
Last Updated 24 ಮಾರ್ಚ್ 2022, 14:29 IST
ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ
ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ   

ಬೆಂಗಳೂರು: ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಾಯಕತ್ವವನ್ನು ಆಲ್‌ರೌಂಡರ್ ರವೀಂದ್ರ ಜಡೇಜಗೆ ಹಸ್ತಾಂತರಿಸಿದ್ದಾರೆ.ಧೋನಿ ಆಟಗಾರನಾಗಿ ತಂಡದ ಪರ ಕಾಣಿಸಿಕೊಳ್ಳಲಿದ್ದು, ಹೊಸ ನಾಯಕನಿಗೆ ನೆರವು ನೀಡಲಿದ್ದಾರೆ ಎಂದು ಸಿಎಸ್‌ಕೆ ಪ್ರಕಟಿಸಿದೆ.

ಭಾರತ ಕ್ರಿಕೆಟ್‌ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿರುವ ಧೋನಿ, ಟಿ20 ವಿಶ್ವಕಪ್‌, ಏಕದಿನ ವಿಶ್ವಕಪ್‌ ಹಾಗೂ ಚಾಂಪಿಯನ್ಸ್‌ ಟ್ರೋಫಿ ಜಯಿಸಿದ ವಿಶ್ವದ ಏಕೈಕ ನಾಯಕ ಎಂಬ ಶ್ರೇಯವನ್ನು ಹೊಂದಿದ್ದಾರೆ.

ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ನಾಲ್ಕು ಸಲ(2010, 2011, 2018, 2021ರಲ್ಲಿ) ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ADVERTISEMENT

ಧೋನಿ ನಾಯಕತ್ವದಿಂದ ಕೆಳಗಿಳಿದಿರುವಬಗ್ಗೆ ವಿರಾಟ್ ಕೊಹ್ಲಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, 'ಹಳದಿ ಜೆರ್ಸಿಯಲ್ಲಿ ದಿಗ್ಗಜನ ನಾಯಕತ್ವದ ಅವಧಿ ಮುಗಿದಿದೆ. ಅಭಿಮಾನಿಗಳು ಎಂದೂ ಮರೆಯದ ಅಧ್ಯಾಯವಿದು. ಅವರನ್ನು ಯಾವಾಗಲೂ ಗೌರವಿಸುತ್ತೇನೆ' ಎಂದಿದ್ದಾರೆ.ಧೋನಿ ಜೊತೆಗಿನ ಚಿತ್ರವೊಂದನ್ನೂ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಅವರೂ ಇತ್ತೀಚೆಗೆ ಭಾರತ ಕ್ರಿಕೆಟ್‌ ತಂಡದ ನಾಯಕತ್ವವನ್ನು ತ್ಯಜಿಸಿದ್ದರು. ಕಳೆದ (2021ರ) ಐಪಿಎಲ್‌ ಟೂರ್ನಿ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಕೊಹ್ಲಿ ಬಳಿಕ ಭಾರತ ತಂಡವನ್ನು ಮೂರೂ(ಟೆಸ್ಟ್, ಏಕದಿನ ಮತ್ತು ಟಿ–20) ಮಾದರಿಯಲ್ಲಿ ರೋಹಿತ್ ಶರ್ಮಾ ಮತ್ತು ಆರ್‌ಸಿಬಿಯನ್ನು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.