ಅಭಿಷೇಕ್ ಶರ್ಮಾ
(ಪಿಟಿಐ ಚಿತ್ರ)
ಹೈದರಾಬಾದ್: ಇಲ್ಲಿನ ರಾಜೀವಗಾಂಧಿ ಮೈದಾನದಲ್ಲಿ ತವರಿನ ಪ್ರೇಕ್ಷಕರ ಮುಂದೆ ಗಳಿಸಿದ ಶತಕದ ಬಳಿಕ ಕಠಿಣ ಸಮಯದಲ್ಲಿ ತಮ್ಮ ಬೆನ್ನಿಗೆ ನಿಂತ ಯುವರಾಜ್ ಸಿಂಗ್ ಹಾಗೂ ಸೂರ್ಯಕುಮಾರ್ ಅವರನ್ನು ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ನೆನಪಿಸಿಕೊಂಡಿದ್ದಾರೆ.
'ಈ ಶತಕವು ತಮ್ಮ ಪಾಲಿಗೆ ಅತ್ಯಂತ ವಿಶೇಷವಾಗಿದ್ದು, ಸತತ ಸೋಲುಗಳ ಸರಪಣಿಯನ್ನು ಮುರಿಯಲು ಬಯಸಿದ್ದೆ' ಎಂದು ಹೇಳಿದ್ದಾರೆ.
ಅಭಿಷೇಕ್ ಶರ್ಮಾ ಶತಕದ (141) ಬಲದಿಂದ ಸನ್ರೈಸರ್ಸ್ ಹೈದರಾಬಾದ್ ತಂಡವು ಶನಿವಾರ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 246 ರನ್ಗಳ ಬೃಹತ್ ಗುರಿ ಬೆನ್ನಟ್ಟಿತು.
'ಸತತ ನಾಲ್ಕು ಪಂದ್ಯಗಳಲ್ಲಿ ಸೋತಿರುವುದರಿಂದ ಪರಿಸ್ಥಿತಿ ತುಂಬಾ ಕಠಿಣವೆನಿಸಿತ್ತು. ಆದರೆ ಈ ಬಗ್ಗೆ ನಾವು ಹೆಚ್ಚು ಚಿಂತಿತರಾಗಿಲ್ಲ. ಯುವರಾಜ್ ಸಿಂಗ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಬಗ್ಗೆಯೂ ಉಲ್ಲೇಖಿಸಲು ಬಯಸುತ್ತೇನೆ. ಕಠಿಣ ಸಮಯದಲ್ಲಿ ಅವರು ನನ್ನ ಸಂಪರ್ಕದಲ್ಲಿದ್ದರು' ಎಂದು ಅಭಿಷೇಕ್ ತಿಳಿಸಿದ್ದಾರೆ.
ಈ ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಎಸ್ಆರ್ಎಚ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನಕ್ಕೆ ಜಿಗಿತ ಕಂಡಿದೆ.
'ಸತತ ಸೋಲುಗಳ ಹೊರತಾಗಿಯೂ ತಂಡದಲ್ಲಿನ ವಾತಾವರಣ ಬದಲಾಗಲಿಲ್ಲ. ಇದೇ ಕಾರಣಕ್ಕಾಗಿ ಇಷ್ಟು ದೊಡ್ಡ ಮೊತ್ತ ಬೆನ್ನಟ್ಟಲು ಸಾಧ್ಯವಾಯಿತು. ಬ್ಯಾಟರ್ಗಳ ವೈಫಲ್ಯಗಳ ಹೊರತಾಗಿಯೂ ತಂಡದಲ್ಲಿದ್ದ ವಾತಾವರಣ ಸಹಜವಾಗಿತ್ತು' ಎಂದು ಹೇಳಿದ್ದಾರೆ.
'ಅಭಿಷೇಕ್ ಶತಕದ ವಿಶೇಷ ಕ್ಷಣವನ್ನು ಪೋಷಕರು ಕಣ್ತುಂಬಿಕೊಂಡರು. ಇದು ಕೂಡ ಅದ್ಭುತ ಪ್ರದರ್ಶನ ನೀಡಲು ಹೆಚ್ಚಿನ ಸ್ಫೂರ್ತಿ ತುಂಬಿತ್ತು' ಎಂದು ಅಭಿಷೇಕ್ ಹೇಳಿದ್ದಾರೆ.
'ನಾನು ಅವರಿಗಾಗಿ ಕಾಯುತ್ತಿದ್ದೆ. ಇಡೀ ತಂಡವೇ ನನ್ನ ಹೆತ್ತವರ ಆಗಮನಕ್ಕಾಗಿ ಕಾಯುತ್ತಿತ್ತು. ಏಕೆಂದರೆ ಎಸ್ಆರ್ಎಚ್ಗೆ ಅವರು ಅದೃಷ್ಟವಂತರು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.