
ಬೆಂಗಳೂರಿನಲ್ಲಿ ಬುಧವಾರ ವಿಧಾನ ಸೌಧದ ಮುಂಭಾಗ ನಡೆದ ಐಪಿಎಲ್ ಚ್ಯಾಂಪಿಯನ್ ತಂಡವಾದ ಆರ್ಸಿಬಿ ಆಟಗಾರರ ಸನ್ಮಾನ ಹಾಗೂ ವಿಜಯೋತ್ಸವದಲ್ಲಿ ಅಭಿಮಾನಿಗಳು ಸಂಭ್ರಮಿಸಿದ ರೀತಿ ಇದು
–ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ಆಡಲಿದೆ. ಇನ್ನೆರಡು ಪಂದ್ಯಗಳನ್ನು ಛತ್ತೀಸಗಡದ ರಾಯಪುರದಲ್ಲಿ ಆಯೋಜಿಸಲಿದೆ.
ಮಂಗಳವಾರ ಸಂಜೆ ಆರ್ಸಿಬಿ ಫ್ರ್ಯಾಂಚೈಸಿಯು ಈ ಕುರಿತು ಅಧಿಕೃತ ಹೇಳಿಕೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ, ಕೆಎಸ್ಸಿಎ ಮತ್ತು ಆರ್ಸಿಬಿ ನಡುವಿನ ಹಗ್ಗಜಗ್ಗಾಟ ಅಂತ್ಯವಾದಂತಾಗಿದೆ.
ಹೋದ ವರ್ಷ ಆರ್ಸಿಬಿಯ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 11 ಅಭಿಮಾನಿಗಳು ದುರ್ಮರಣಕ್ಕೀಡಾಗಿದ್ದರು. ಐಪಿಎಲ್ ಆರಂಭವಾಗಿ 18 ವರ್ಷಗಳ ನಂತರ ಆರ್ಸಿಬಿ ಜಯಿಸಿದ್ದ ಚೊಚ್ಚಲ ಪ್ರಶಸ್ತಿ ಸಂಭ್ರಮವು ಕರಾಳ ದಿನವಾಗಿ ಮಾರ್ಪಾಡಾಗಿತ್ತು.
ನಂತರದ ಬೆಳವಣಿಗೆಗಳಲ್ಲಿ ರಾಜ್ಯ ಸರ್ಕಾರವು, ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿರಲಿಲ್ಲ. ಸರ್ಕಾರ ನೇಮಕ ಮಾಡಿದ್ದ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಆಯೋಗವು ಕ್ರೀಡಾಂಗಣದಲ್ಲಿ ಸುರಕ್ಷತೆಗಾಗಿ ಕೆಲವು ಸುಧಾರಣೆ ಕ್ರಮಗಳನ್ನು ಶಿಫಾರಸು ಮಾಡಿತ್ತು. ಅದರ ಮೇಲ್ವಿಚಾರಣೆಗಾಗಿ ಸರ್ಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳಿರುವ ಕಾರ್ಯಪಡೆಯನ್ನು ನಿಯೋಜಿಸಿತ್ತು. ಕೆಎಸ್ಸಿಎ ಮತ್ತು ಸರ್ಕಾರದ ನಡುವೆ ಹಲವು ಸುತ್ತುಗಳ ಮಾತುಕತೆ, ಕಾಮಗಾರಿ ಪರಿಶೀಲನೆಯ ನಂತರ ಈಚೆಗಷ್ಟೇ ಐಪಿಎಲ್ ಪಂದ್ಯಗಳ ಆಯೋಜನೆಗೆ ಷರತ್ತುಬದ್ಧ ಅನುಮತಿ ದೊರೆತಿತ್ತು.
ಈ ಹಿನ್ನೆಲೆಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ, ‘ಆರ್ಸಿಬಿ ತಮ್ಮ ಪಂದ್ಯಗಳನ್ನು ಬೆಂಗಳೂರಿನಲ್ಲಿಯೇ ಆಡಬೇಕು’ ಎಂದು ಮನವಿ ಮಾಡಿದ್ದರು. ತದನಂತರ ಆರ್ಸಿಬಿ, ಕೆಎಸ್ಸಿಎ ಹಾಗೂ ಸರ್ಕಾರದ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿತ್ತು.
‘ಕಳೆದ ಕೆಲವು ತಿಂಗಳುಗಳ ನಿರಂತರ ಪರಿಶ್ರಮ ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತುಕತೆಗಳಿಂದಾಗಿ ಮಹತ್ವದ ಬೆಳವಣಿಗೆ ಆಗಿದೆ. ಪಂದ್ಯಗಳು ತವರಿಗೆ ಮರಳುತ್ತಿವೆ. ಆರ್ಸಿಬಿಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐದು ಹಾಗೂ ರಾಯಪುರದಲ್ಲಿ ಎರಡು ಪಂದ್ಯಗಳು ನಡೆಯಲಿವೆ’ ಎಂದು ಆರ್ಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಮೆನನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಚಿನ್ನಸ್ವಾಮಿ ಕ್ರೀಡಾಂಗಣ ನಮಗೆ ತವರುಮನೆಗಿಂತ ಮಿಗಿಲು. ನಮ್ಮ ತಂಡದ ನಿಜವಾದ ಅಸ್ತಿತ್ವ ಇರುವುದೇ ಇದು. ಇಲ್ಲಿಯ ಅಭಿಮಾನಿಗಳಿಂದಾಗಿ ನಮ್ಮ ಆಟಗಾರರ ಶಕ್ತಿಯು ದುಪ್ಪಟ್ಟಾಗುತ್ತದೆ. ಅಭಿಮಾನಿಗಳು ಬೇಷರತ್ ಆಗಿ ನಮ್ಮನ್ನು ಬೆಂಬಲಿಸುವ ರೀತಿ ಅನನ್ಯವಾಗಿದೆ. ತವರಿನಲ್ಲಿ ತಮ್ಮ ನೆಚ್ಚಿನ ತಂಡದ ಆಟವನ್ನು ನೋಡುವುದು ಅವರ ಹಕ್ಕಾಗಿದೆ. ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ನಾವು ಆಭಾರಿಯಾಗಿದ್ದೇವೆ. ಅವರೆಲ್ಲರ ನಿರಂತರ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲದಿಂದಾಗಿ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸಲು ಸಾಧ್ಯವಾಗುತ್ತಿದೆ’ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.