ಅಡಿಲೇಡ್: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ಸಾಗುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ಯಾವುದೇ ಬೆಲೆ ತೆತ್ತಾದರೂ ಆ ಕ್ಷಣ ಅಲ್ಲಿರಲು ಬಯಸುತ್ತೇನೆ ಎಂದು ಹೇಳಿದರು.
ರಾಷ್ಟ್ರೀಯ ಕರ್ತವ್ಯವನ್ನು ಬದಿಗೊತ್ತಿ ವಿರಾಟ್ ಕೊಹ್ಲಿ, ವೈಯಕ್ತಿಕ ಬದ್ಧತೆಗಳಿಗೆ ಹೆಚ್ಚಿನ ಆದತ್ಯೆ ನೀಡುತ್ತಾರೆ ಎಂಬ ಬಗ್ಗೆ ಆಕ್ರೋಶಗಳು ಎದ್ದಿದ್ದವು. ಈ ಬಗ್ಗೆ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಸ್ಟೀವನ್ ಸ್ಮಿತ್ ಜೊತೆ ನಡೆಸಿದ ಸಂವಾದದಲ್ಲಿ ವಿರಾಟ್ ಕೊಹ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ನನ್ನ ಮನಸ್ಸಿನಲ್ಲಿ ಸ್ಪಷ್ಟ ನಿರ್ಧಾರವಿದೆ. ದೇಶಕ್ಕಾಗಿ ಆಡಲು ನೀವು ಬದ್ಧವಾಗಿರುವಂತೆಯೇ ಇದು ಜೀವನದ ಬಹಳ ವಿಶೇಷವಾದ ಕ್ಷಣವಾಗಿದ್ದು, ಯಾವುದೇ ಬೆಲೆ ತೆತ್ತಾದರೂ ಆ ಕ್ಷಣ ಅಲ್ಲಿರಲು ಬಯಸುತ್ತೇನೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಕೊನೆಯ ಮೂರು ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.
ವ್ಯಕ್ತಿಯನ್ನು ವೈಯಕ್ತಿಕವಾಗಿ ಗುರಿಯಾಗಿಸುವುದು ಸರಿಯಲ್ಲ...
ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದು ಒಂದು ವರ್ಷ ನಿಷೇಧ ಶಿಕ್ಷೆ ಬಳಿಕ ಕಳೆದ ವರ್ಷ ಅಂತರ ರಾಷ್ಟ್ರೀಯ ಕ್ರಿಕೆಟ್ಗೆ ಮರಳಿದ್ದ ಸ್ಟೀವನ್ ಸ್ಮಿತ್ ಅವರನ್ನು ಅಭಿಮಾನಿಗಳು ಅಸಭ್ಯ ಮಾತುಗಳಿಂದ ನಿಂದಿಸಿದ್ದರು.
ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಸ್ಮಿತ್ ವಿರುದ್ಧ ಅಭಿಮಾನಿಗಳು ಘೋಷಣೆ ಕೂಗಿದರು. ತಕ್ಷಣ ಎಚ್ಚೆತ್ತುಕೊಂಡ ವಿರಾಟ್ ಕೊಹ್ಲಿ, ಅಭಿಮಾನಿಗಳಲ್ಲಿ ಉತ್ತಮ ವರ್ತನೆ ತೋರುವಂತೆ ಮನವಿ ಮಾಡಿಕೊಂಡರು. ವಿರಾಟ್ ಕೊಹ್ಲಿ ಕ್ರೀಡಾಸ್ಫೂರ್ತಿಯು ವ್ಯಾಪಕ ಮನ್ನಣೆಗೆ ಪಾತ್ರವಾಗಿತ್ತು. ಈ ಬಗ್ಗೆ ಸ್ವತಃ ಸ್ಟೀವನ್ ಸ್ಮಿತ್ ಧನ್ಯವಾದವನ್ನು ಸಲ್ಲಿಸಿದರು.
ತಾಜಾ ಸಂವಾದದಲ್ಲಿ ಸ್ಮಿತ್ ಜೊತೆಗಿನ ಈ ಘಟನೆಯನ್ನು ನೆನಪಿಸಿಕೊಂಡಿರುವ ವಿರಾಟ್ ಕೊಹ್ಲಿ, ಆಟಗಾರರನ್ನು ವೈಯಕ್ತಿಕವಾಗಿ ಗುರಿಯಾಗಿಸುವುದು ಸರಿಯಲ್ಲ ಎಂದರು.
ಜನರು ತಪ್ಪುಗಳನ್ನು ಮಾಡುತ್ತಾರೆ ಮತ್ತು ಅದರಿಂದ ಕಲಿತುಕೊಳ್ಳುತ್ತಾರೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.