ADVERTISEMENT

ರಣಜಿ ಕ್ರಿಕೆಟ್ ಸೆಮಿಫೈನಲ್: ಇನಿಂಗ್ಸ್ ಮುನ್ನಡೆ ಸಾಧಿಸಿದ ಕರ್ನಾಟಕ

ಗಿರೀಶದೊಡ್ಡಮನಿ
Published 26 ಜನವರಿ 2019, 7:23 IST
Last Updated 26 ಜನವರಿ 2019, 7:23 IST
ಅಭಿಮನ್ಯು ಮಿಥುನ್  ಸಂಭ್ರಮ   –ಪ್ರಜಾವಾಣಿ ಚಿತ್ರ
ಅಭಿಮನ್ಯು ಮಿಥುನ್  ಸಂಭ್ರಮ   –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕರ್ನಾಟಕ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೌರಾಷ್ಟ್ರ ಎದುರು ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 39 ರನ್‌ಗಳ ಮುನ್ನಡೆ ಸಾಧಿಸಿತು.

ಗುರುವಾರ ಟಾಸ್ ಗೆದ್ದಿದ್ದ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 275 ರನ್‌ ಗಳಿಸಿತ್ತು. ಶುಕ್ರವಾರ ಸೌರಾಷ್ಟ್ರ ತಂಡವು ರೋನಿತ್ ಮೋರೆ ಚುರುಕಿನ ದಾಳಿಗೆ ತತ್ತರಿಸಿತ್ತು. ದಿನದಾಟದ ಅಂತ್ಯಕ್ಕೆ 7 ವಿಕೆಟ್‌ಗಳಿಗೆ 227 ರನ್‌ ಗಳಿಸಿತ್ತು. ಶನಿವಾರ ಬೆಳಿಗ್ಗೆ ಇನಿಂಗ್ಸ್‌ ಮುಂದುವರಿಸಿದ ಪ್ರವಾಸಿ ಬಳಗಕ್ಕೆ ಅಭಿಮನ್ಯು ಮಿಥುನ್ ಪೆಟ್ಟು ಕೊಟ್ಟರು. ಧರ್ಮೇಂದ್ರಸಿಂಹ ಜಡೇಜ ಮತ್ತು ಜಯದೇವ ಉನದ್ಕತ್ ಅವರ ವಿಕೆಟ್‌ಗಳನ್ನು ಗಳಿಸಿದರು. ರೋನಿತ್ ಮೋರೆ ಅರ್ಪಿತ್ ವಾಸವದಾ (30 ರನ್) ವಿಕೆಟ್ ಗಳಿಸಿದರು. ಈ ಇನಿಂಗ್ಸ್‌ನಲ್ಲಿ ಅವರು ಒಟ್ಟು ಆರು ವಿಕೆಟ್ ಕಬಳಿಸಿದರು.

ಈ ಟೂರ್ನಿಯಲ್ಲಿ ಅವರು ಒಟ್ಟು ನಾಲ್ಕು ಬಾರಿ ಐದು ವಿಕೆಟ್‌ಗಳ ಗುಚ್ಛ ಗಳಿಸಿದ ಸಾಧನೆ ಮಾಡಿದ್ದಾರೆ. ಬೆಳಗಾವಿಯ ರೋನಿತ್ ಒಟ್ಟು 36 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಈ ಬಾರಿ ರಣಜಿ ಪಂದ್ಯಾವಳಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಅವರಾಗಿದ್ದಾರೆ.

ADVERTISEMENT

ಎರಡನೇ ಇನಿಂಗ್ಸ್‌ಆರಂಭಿಸಿರುವ ಕರ್ನಾಟಕ ತಂಡವು ಊಟದ ವಿರಾಮದ ವೇಳೆಗೆ23ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 80ರನ್‌ ಗಳಿಸಿದೆ. ಇದರೊಂದಿಗೆ 119ರನ್‌ ಮುನ್ನಡೆ ಸಾಧಿಸಿದೆ.ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಮತ್ತು ಕರುಣ್ ನಾಯರ್ ಔಟಾಗಿದ್ದು,ಮಯಂಕ್ ಅಗರವಾಲ್ (ಬ್ಯಾಟಿಂಗ್ 32) ಮತ್ತು ಮನೀಷ್ ಪಾಂಡೆ (ಬ್ಯಾಟಿಂಗ್ 17) ಕ್ರೀಸ್‌ನಲ್ಲಿದ್ದಾರೆ. ಸೌರಾಷ್ಟ್ರದ ಎಡಗೈ ಮಧ್ಯಮವೇಗಿ ಜಯದೇವ ಉನದ್ಕತ್ ಒಂದು ಮತ್ತು ಪ್ರೇರಕ್ ಮಂಕಡ್ ಎರಡು ವಿಕೆಟ್ ಕಬಳಿಸಿದ್ದಾರೆ.

ಸ್ಕೋರ್ ವಿವರ

ಮೊದಲ ಇನಿಂಗ್ಸ್‌

ಕರ್ನಾಟಕ 275ಆಲೌಟ್‌,ಸೌರಾಷ್ಟ್ರ: 236 ಆಲೌಟ್‌

ವಿಕೆಟ್ ಪತನ: 8–230 (ಧರ್ಮೇಂದ್ರಸಿಂಹ; 67.5), 9–230 (ಉನದ್ಕತ್;67.6), 10–236 (ವಾಸವದಾ; 70.6)

ಎರಡನೇ ಇನಿಂಗ್ಸ್‌

ಕರ್ನಾಟಕ: 4ವಿಕೆಟ್‌ ನಷ್ಟಕ್ಕೆ119ರನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.