ದುಬೈ: ಒಂದು ಸಣ್ಣ ತಪ್ಪು ಕೂಡ ಭಾರಿ ಸಂಕಷ್ಟ ತಂದೊಡ್ಡಬಹುದು. ಇಡೀ ಟೂರ್ನಿಗೆ ಅದರಿಂದ ಧಕ್ಕೆಯಾಗಬಹುದು. ಆದ್ದರಿಂದ ಜೈವಿಕ ರಕ್ಷಣಾ ವಲಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಜಾಗರೂಕರಾಗಿರಬೇಕು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.
ಸೋಮವಾರ ನಡೆದ ತಂಡದ ಮೊದಲ ಆನ್ಲೈನ್ ಸಭೆಯಲ್ಲಿ ಮಾತನಾಡಿದ ಅವರು ‘ಕೋವಿಡ್ ಹಿನ್ನೆಲೆಯಲ್ಲಿ ಯುಎಇ ಆಡಳಿತವು ಜಾರಿಗೊಳಿಸಿರುವ ನಿರ್ಬಂಧಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಯಾವುದರಲ್ಲೂ ರಾಜಿ ಮಾಡಿಕೊಳ್ಳಬಾರದು’ ಎಂದು ಸೂಚಿಸಿದರು.
ಆರ್ಸಿಬಿಯ ಕ್ರಿಕೆಟ್ ಆಪರೇಷನ್ಸ್ ವಿಭಾಗದ ನಿರ್ದೇಶಕ ಮೈಕ್ ಹೇಸನ್ ‘ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ನಿಯಮಗಳನ್ನು ಮೀರಿದ ಆಟಗಾರನನ್ನು ಏಳು ದಿನಗಳ ಪ್ರತ್ಯೇಕವಾಸಕ್ಕೆ ಕಳುಹಿಸಲಾಗುತ್ತದೆ. ವಾಪಸ್ ಬಂದ ನಂತರವೂ ಪರೀಕ್ಷೆ ಮಾಡಿ ವರದಿ ನೆಗೆಟಿವ್ ಬಂದರೆ ಮಾತ್ರ ತಂಡದ ಜೊತೆ ಸೇರಿಸಲಾಗುತ್ತದೆ. ಆದ್ದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.