ADVERTISEMENT

IPL 2022-SRH vs RR| ಹೈದರಾಬಾದ್‌ ವಿರುದ್ಧ ಗೆಲುವು: ರಾಜಸ್ಥಾನ ಶುಭಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 19:16 IST
Last Updated 29 ಮಾರ್ಚ್ 2022, 19:16 IST
ರಾಜಸ್ಥಾನ ರಾಯಲ್ಸ್‌ ತಂಡದ ಸಂಭ್ರಮ
ರಾಜಸ್ಥಾನ ರಾಯಲ್ಸ್‌ ತಂಡದ ಸಂಭ್ರಮ    

ಪುಣೆ: ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್‌ ತಂಡದ ಬ್ಯಾಟಿಂಗ್ ಶಕ್ತಿಯ ಮುಂದೆಸನ್‌ರೈಸರ್ಸ್ಹೈದರಾಬಾದ್ಶರಣಾಯಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ರಾಜಸ್ಥಾನ ತಂಡವು 61 ರನ್‌ಗಳಿಂದ ಜಯಿಸಿತು.

ಟಾಸ್ ಗೆದ್ದಹೈದರಾಬಾದ್ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಅವರ ಲೆಕ್ಚಾಚಾರ ಕೈಗೂಡಲಿಲ್ಲ. ರಾಜಸ್ಥಾನ ತಂಡದ ಸಂಜು ಸ್ಯಾಮ್ಸನ್ (55;27ಎ), ಕನ್ನಡಿಗ ದೇವದತ್ತ ಪಡಿಕ್ಕಲ್ (41; 29ಎ) ಮತ್ತು ಶಿಮ್ರೊನ್ ಹೆಟ್ಮೆಯರ್ (32; 13ಎ) ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಇದರಿಂದಾಗಿ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಅದಕ್ಕುತ್ತರವಾಗಿಹೈದರಾಬಾದ್ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 149 ರನ್‌ ಗಳಿಸಿತು.

ADVERTISEMENT

ಬ್ಯಾಟಿಂಗ್ ಪಡೆಯು ದೊಡ್ಡ ಮೊತ್ತ ಗಳಿಸಿದ್ದು, ರಾಜಸ್ಥಾನ ತಂಡದ ಬೌಲರ್‌ಗಳ ಆತ್ಮವಿಶ್ವಾಸ ಇಮ್ಮಡಿಸುವಂತೆ ಮಾಡಿತ್ತು. ಅದರಿಂದಾಗಿಯೇ ಎದುರಾಳಿ ತಂಡಕ್ಕೆ ಆರಂಭದಿಂದಲೇ ಪೆಟ್ಟು ನೀಡಿದರು.

ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೌಲಿಂಗ್‌ನಲ್ಲಿ ಅಗ್ರಕ್ರಮಾಂಕದ ಬ್ಯಾಟಿಂಗ್ ಪಡೆ ಕುಸಿಯಿತು. ತಂಡದ ಮೊತ್ತ 37 ರನ್‌ಗಳಾಗುವಷ್ಟರಲ್ಲಿ ಐದು ವಿಕೆಟ್‌ಗಳು ಪತನವಾದವು. ಅನುಭವಿ ಕೇನ್ ವಿಲಿಯಮ್ಸನ್, ಅಭಿಷೇಕ್ ವರ್ಮಾ ಒಂದಂಕಿ ಗಳಿಸಿದರೆ, ರಾಹುಲ್ ತ್ರಿಪಾಠಿ ಮತ್ತು ನಿಕೊಲಸ್ ಪೂರನ್ ಖಾತೆಯನ್ನೇ ತೆರೆಯಲಿಲ್ಲ.

ಮರ್ಕರಂ, ವಾಷಿಂಗ್ಟನ್ ಹೋರಾಟ: ರಾಯಲ್ಸ್ ಬೌಲರ್‌ಗಳ ಆರ್ಭಟದ ನಡುವೆಯೂ ಏಡನ್ ಮರ್ಕರಂ (ಔಟಾಗದೆ 57) ಮತ್ತು ವಾಷಿಂಗ್ಟನ್ ಸುಂದರ್ (40; 14ಎ) ಹೋರಾಟ ನಡೆಸಿದರು. ಆದರೆ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ.ರಾಯಲ್ಸ್‌ ಬೌಲರ್ ಚಾಹಲ್ ಮೂರು ವಿಕೆಟ್ ಗಳಿಸಿದರು.

ಬಟ್ಲರ್ ಉತ್ತಮ ಆರಂಭ:ರಾಜಸ್ಥಾನ್ ತಂಡಕ್ಕೆ ಜೋಸ್ ಬಟ್ಲರ್ (35; 28ಎ) ಮತ್ತು ಯಶಸ್ವಿ ಜೈಸ್ವಾಲ್ ಜೋಡಿಯು ಉತ್ತಮ ಆರಂಭ ನೀಡಿತು.ಇವರಿಬ್ಬರ ಆರ್ಭಟದಿಂದಾಗಿ ಮೊದಲ ಆರು ಓವರ್‌ಗಳಲ್ಲಿಯೇ 58 ರನ್‌ಗಳು ಸೇರಿದವು. ಏಳನೇ ಓವರ್‌ನಲ್ಲಿ ರೊಮೆರಿಯೊ ಶೆಫರ್ಡ್ ಬೌಲಿಂಗ್‌ನಲ್ಲಿ ಜೈಸ್ವಾಲ್ ಮತ್ತು ಒಂಬತ್ತನೇ ಓವರ್‌ನಲ್ಲಿ ಬಟ್ಲರ್ ಔಟಾದರು.

ಅವರಿಬ್ಬರೂ ಹಾಕಿದ ಅಡಿಪಾಯದ ಮೇಲೆ ಉಳಿದ ಬ್ಯಾಟರ್‌ಗಳು ರನ್‌ಗಳ ಗೋಪುರ ನಿರ್ಮಿಸಿದರು. ಸಂಜು ಮತ್ತು ದೇವದತ್ತ ಮೂರನೇ ವಿಕೆಟ್ ಜೊತೆಯಾಟದಲ್ಲಿ 73 ರನ್‌ ಸೇರಿಸಿದರು. ಸಂಜು ಬ್ಯಾಟ್‌ನಿಂದ ಐದು ಸಿಕ್ಸರ್‌ಗಳು ಸಿಡಿದವು. 203.70ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.

ಹೋದ ವರ್ಷ ಆರ್‌ಸಿಬಿಯಲ್ಲಿ ಆರಂಭಿಕ ಬ್ಯಾಟರ್ ಆಗಿದ್ದ ದೇವದತ್ತ ಈ ಬಾರಿ ರಾಜಸ್ಥಾನ ತಂಡದಲ್ಲಿ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದರು. 15ನೇ ಓವರ್‌ನಲ್ಲಿ ಉಮ್ರನ್ ಮಲಿಕ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಎರಡು ಓವರ್‌ಗಳ ನಂತರ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಅಬ್ದುಲ್ ಸಮದ್‌ಗೆ ಕ್ಯಾಚಿತ್ತ ಸಂಜು ಡಗ್‌ಔಟ್ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.