ADVERTISEMENT

ಟಿ20 ವಿಶ್ವಕಪ್‌ಗೆ ರೋಹಿತ್ ಶರ್ಮಾ ನಾಯಕನಾಗಲಿ: ಸೌರವ್ ಗಂಗೂಲಿ

ಪಿಟಿಐ
Published 7 ಜನವರಿ 2024, 13:53 IST
Last Updated 7 ಜನವರಿ 2024, 13:53 IST
<div class="paragraphs"><p>ಸೌರವ್ ಗಂಗೂಲಿ</p></div>

ಸೌರವ್ ಗಂಗೂಲಿ

   

ಕೋಲ್ಕತ್ತ: ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರಿಗೆ ಸ್ಥಾನ ನೀಡಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಭಾನುವಾರ ಹೇಳಿದ್ದಾರೆ. 

ಸುಮಾರು 14 ತಿಂಗಳುಗಳಿಂದ ಯಾವುದೇ ಟಿ20 ಪಂದ್ಯದಲ್ಲಿ ಕಾಣಿಸಿಕೊಳ್ಳದ ಈ ಜೋಡಿಯನ್ನು ಜನವರಿ 11 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಲಾಗುತ್ತದೆಯೇ ಎಂದು ಕಾದುನೋಡಬೇಕಿದೆ.

ADVERTISEMENT

‘ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಅವರು ತಂಡವನ್ನು ಮುನ್ನಡೆಸಬೇಕು. ವಿರಾಟ್ ಕೊಹ್ಲಿ ಕೂಡ ಇರಬೇಕು. ವಿರಾಟ್  ಅತ್ಯುತ್ತಮ ಆಟಗಾರ’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಯಶಸ್ವಿ ಜೈಸ್ವಾಲ್ ಅವರ ಪ್ರದರ್ಶನದಿಂದ ಪ್ರಭಾವಿತರಾಗಿರುವ ಗಂಗೂಲಿ , ‘ಯುವ ಆರಂಭಿಕ ಆಟಗಾರನಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ. ಎರಡನೇ ಟೆಸ್ಟ್‌ನಲ್ಲಿ ಉತ್ತಮವಾಗಿ ಆಡಿದ್ದಾರೆ.  ಇದು ಅವರ ವೃತ್ತಿಜೀವನದ ಪ್ರಾರಂಭವಾಗಿದೆ’ ಎಂದು ಹೇಳಿದರು. 

‘ಒಂದು ಪಂದ್ಯವನ್ನು ಸೋತ ನಂತರ ಜನರು ಬಹಳಷ್ಟು ಮಾತನಾಡುತ್ತಾರೆ. ಭಾರತವು ಬಲಿಷ್ಠ ತಂಡವಾಗಿದೆ. ಏಕದಿನ ಸರಣಿ ಗೆದ್ದು, ಟೆಸ್ಟ್ ಮತ್ತು ಟಿ20 ಸರಣಿಗಳನ್ನು ಡ್ರಾ ಮಾಡಿಕೊಂಡಿದೆ‘ ಎಂದರು.

ಗಾವಸ್ಕರ್ ಬೆಂಬಲ: ರೋಹಿತ್‌ ಮತ್ತು ವಿರಾಟ್‌ ಭಾರತ ತಂಡದಲ್ಲಿರಬೇಕು. ಇಬ್ಬರು ಹಿರಿಯ ಆಟಗಾರರು ಪ್ರಮುಖ ಬ್ಯಾಟರ್‌ಗಳು ಮಾತ್ರವಲ್ಲದೆ ಅದ್ಭುತ ಫೀಲ್ಡರ್‌ಗಳು ಎಂದು ಮಾಜಿ ನಾಯಕ ಸುನಿಲ್ ಗಾವಸ್ಕರ್  ಹೇಳಿದ್ದಾರೆ.

‘ವಿರಾಟ್ ಮತ್ತು ರೋಹಿತ್ ಉತ್ತಮ ಫೀಲ್ಡರ್‌ಗಳು. ಡ್ರೆಸ್ಸಿಂಗ್ ರೂಮ್‌ನಲ್ಲಿ ಹಿರಿತನದ ಜೊತೆಗೆ, ಅವರು ಮೈದಾನದಲ್ಲಿಯೂ ಕೊಡುಗೆ ನೀಡುತ್ತಾರೆ. ಕಳೆದ ಒಂದೂವರೆ ವರ್ಷದಲ್ಲಿ ಕೊಹ್ಲಿ ಫಾರ್ಮ್ ಅತ್ಯುತ್ತಮವಾಗಿದೆ. ಅವರು 2023ರ ವಿಶ್ವಕ‍ಪ್‌ನಲ್ಲಿ 3 ಶತಕಗಳೊಂದಿಗೆ 750 ರನ್ ಗಳಿಸಿದರು. ಆದ್ದರಿಂದ ಅವರ ಸೀಮಿತ ಓವರ್‌ಗಳ ಬ್ಯಾಟಿಂಗ್ ಬಗ್ಗೆ ಯಾವುದೇ ಸಂದೇಹವಿಲ್ಲ‘ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.