
ಸೂರ್ಯಕುಮಾರ್ ಯಾದವ್–ಶ್ರೇಯಸ್ ಅಯ್ಯರ್
ಚಿತ್ರ: Deccan Herald
ಕ್ಯಾನ್ಬೆರಾ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಪಕ್ಕೆಲುಬು ಗಾಯಕ್ಕೆ ಒಳಗಾಗಿ ಆಂತರಿಕ ರಕ್ತಸ್ರಾವದಿಂದ ಆಸ್ಪತ್ರೆ ದಾಖಲಾಗಿರುವ ಶ್ರೇಯಸ್ ಅಯ್ಯರ್ ಅವರ ಆರೋಗ್ಯದ ಕುರಿತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶುಭ ಹಾರೈಸಿದರು.
ಕ್ಯಾನ್ಬೆರಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರ್ಯಕುಮಾರ್ ಯಾದವ್, 'ದೇವರು ಅವರ ಪರವಾಗಿದ್ದಾರೆ, ವೈದ್ಯರ ಮೇಲ್ವಿಚಾರಣೆಯಲ್ಲಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅವರಿಗೆ ಸಂಪೂರ್ಣ ಸಹಕಾರ ನೀಡಿದೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದಾರೆ. ಅವರನ್ನು ನಮ್ಮೊಂದಿಗೆ ತವರಿಗೆ ಕರೆದೊಯ್ಯುತ್ತೇವೆ' ಎಂದರು.
‘ನಾವು ವೈದ್ಯರಲ್ಲ, ಮೈದಾನದ ಹೊರಗೆ ನಿಂತು ನೋಡಿದಾಗ ಶ್ರೇಯಸ್ ಕ್ಯಾಚ್ ಪ್ರಯತ್ನದ ಬಳಿಕ ಅವರು ಸಾಮಾನ್ಯ ಸ್ಥಿತಿಯಲ್ಲಿರುವಂತೆ ಕಂಡರು. ನಾವು ಯಾರೂ ಕೂಡ ಆ ಸ್ಥಳದಲ್ಲಿ ಇರಲಿಲ್ಲ. ಅಲ್ಲಿದ್ದವರಿಗೆ ಮಾತ್ರ ನಿಜವಾಗಿ ಆ ಸಮಯದಲ್ಲಿ ಏನಾಯಿತು ಎಂದು ಹೇಳಲು ಸಾಧ್ಯ’ ಎಂದು ಸೂರ್ಯಕುಮಾರ್ ಹೇಳಿದರು.
ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಏಕದಿನ ಪಂದ್ಯದ ಸಂದರ್ಭದಲ್ಲಿ ಹರ್ಷಿತ್ ರಾಣಾ ಬೌಲಿಂಗ್ನಲ್ಲಿ ಅಲೆಕ್ಸ್ ಕ್ಯಾರಿ ಹೊಡೆದ ಕಠಿಣ ಕ್ಯಾಚ್ ಪಡೆಯುವ ಸಂದರ್ಭದಲ್ಲಿ ನೆಲಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.