ಬೆಂಗಳೂರು: ದುರಾಸೆ ಎನ್ನುವುದು ಮಾನವನ ಅಂತರಾಳದಿಂದ ವ್ಯಕ್ತವಾಗುವ ಗುಣ. ಶಿಕ್ಷಣ, ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಈ ದುರಾಸೆಯ ಮುಂದೆ ಮಂಕಾಗುತ್ತವೆ. ಆದ್ದರಿಂದಲೇ ಆಟಗಾರರು ಮ್ಯಾಚ್ ಫಿಕ್ಸಿಂಗ್ನಂತಹ ಜಾಲ ಗಳಿಗೆ ಬೀಳುತ್ತಾರೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದರು.
ಶುಕ್ರವಾರ ಎಂಬಸಿ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಪ್ರೀಮಿಯರ್ ಲೀಗ್ ಮತ್ತು ತಮಿಳುನಾಡು ಪ್ರೀಮಿಯರ್ ಲೀಗ್ಗಳಲ್ಲಿ ಕೇಳಿಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದರು.
‘ಒಂದು ಬಾರಿ ಇಂತಹ ಜಾಲದಲ್ಲಿ ಸಿಲುಕಿದರೆ ಹೊರಬರುವುದು ಸಾಧ್ಯವೇ ಇಲ್ಲ. ಏಕೆಂದರೆ ಇವತ್ತು ಕ್ರಿಕೆಟ್ನ ಪ್ರತಿ ಯೊಂದು ಆಯಾಮವನ್ನೂ ಟೆಲಿವಿಷನ್ ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಜನರ ಕಣ್ಣು ಆಟಗಾರರ ಮೇಲೆ ಸದಾ ಇರುತ್ತದೆ. ಆದ್ದರಿಂದ ತಪ್ಪಿಸಿಕೊಳ್ಳುವ ಅವಕಾಶ ಇಲ್ಲವೇ ಇಲ್ಲ. ಆದ್ದರಿಂದ ದುರಾಸೆಯನ್ನು ಜಯಿಸುವಂತಹ ಮಾರ್ಗದರ್ಶನವನ್ನು ಯುವ ಆಟಗಾರ ರಿಗೆ ನೀಡುವ ಅವಶ್ಯಕತೆ ಇದೆ’ ಎಂದರು.
‘ರಾಜ್ಯ ಸಂಸ್ಥೆಗಳು ಲೀಗ್ ಟೂರ್ನಿಗಳನ್ನು ನಡೆಸುತ್ತಿರುವುದು ತಪ್ಪಲ್ಲ. ಕೆಪಿಎಲ್ನಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳು ಅವಕಾಶ ಪಡೆಯುತ್ತಿದ್ದಾರೆ. ಟಿಎನ್ಪಿಎಲ್ನಲ್ಲಿಯೂ ಅಷ್ಟೇ. ಈ ಲೀಗ್ಗಳು ಉತ್ತಮವಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.