ಹಾರ್ದಿಕ್ ಪಾಂಡ್ಯ
(ಚಿತ್ರ ಕೃಪೆ: X/@BCCIdomestic)
ಇಂದೋರ್: ಸೈಯದ್ ಮುಶ್ತಾಕ್ ಅಲಿ ಟ್ರೋಫಿ ದೇಶೀಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಅಬ್ಬರಿಸಿದ್ದಾರೆ.
ತ್ರಿಪುರಾ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದ್ದಾರೆ.
ಆ ಮೂಲಕ ಬರೋಡಾ ತಂಡವು ತ್ರಿಪುರಾ ವಿರುದ್ಧ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ತ್ರಿಪುರಾ ನಾಯಕ ಮಂದೀಪ್ ಅರ್ಧಶತಕದ (50) ಹೊರತಾಗಿಯೂ ಒಂಬತ್ತು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬರೋಡಾ ಪರ ಆಕಾಶ್ ಮಹಾರಾಜ್ ಸಿಂಗ್ ಮೂರು ಮತ್ತು ನಾಯಕ ಕೃಣಾಲ್ ಪಾಂಡ್ಯ ಎರಡು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಬರೋಡಾ 11.2 ಓವರ್ಗಳಲ್ಲೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಪಾಂಡ್ಯ ಕೇವಲ 23 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ 47 ರನ್ ಗಳಿಸಿದರು.
ಪರ್ವೇಜ್ ಸುಲ್ತಾನ್ ಅವರ ಓವರ್ವೊಂದರಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಸೇರಿದಂತೆ 28 ರನ್ ಗಳಿಸಿದರು.
ಈ ಮೊದಲು ತಮಿಳುನಾಡು ವಿರುದ್ಧ ನಡೆದ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಓವರ್ವೊಂದರಲ್ಲಿ ನಾಲ್ಕು ಸಿಕ್ಸರ್ ಸೇರಿದಂತೆ 29 ರನ್ ಸಿಡಿಸಿದ್ದರು. ಇದರಲ್ಲಿ ಒಂದು ನೋಬಾಲ್ ಸೇರಿತ್ತು.
ಪಾಂಡ್ಯ 30 ಎಸೆತಗಳಲ್ಲಿ 69 ರನ್ (7 ಸಿಕ್ಸರ್, 4 ಬೌಂಡರಿ) ಗಳಿಸಿದ್ದರು. ಆ ಮೂಲಕ ತಮಿಳುನಾಡು ವಿರುದ್ಧ ಬರೋಡಾದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.