ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ | ನಾಲ್ಕರ ಘಟ್ಟದಲ್ಲಿ ಮುಂಬೈ, ಬರೋಡಾ ಮುಖಾಮುಖಿ

ಅಜಿಂಕ್ಯ ರಹಾನೆ ಮಿಂಚಿನ ಅರ್ಧಶತಕ; ಹಾರ್ದಿಕ್, ಮೆರಿವಾಲಾ ಉತ್ತಮ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 13:25 IST
Last Updated 11 ಡಿಸೆಂಬರ್ 2024, 13:25 IST
<div class="paragraphs"><p>ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಅವರು ಹಾರ್ದಿಕ್ ಪಾಂಡ್ಯ ಹಾಗೂ ಲುಕ್ಮನ್ ಮೆರಿವಾಲಾ ಅವರೊಂದಿಗೆ ಮಾತುಕತೆ ನಡೆಸಿದರು&nbsp;  </p></div>

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಬರೋಡಾ ತಂಡದ ನಾಯಕ ಕೃಣಾಲ್ ಪಾಂಡ್ಯ ಅವರು ಹಾರ್ದಿಕ್ ಪಾಂಡ್ಯ ಹಾಗೂ ಲುಕ್ಮನ್ ಮೆರಿವಾಲಾ ಅವರೊಂದಿಗೆ ಮಾತುಕತೆ ನಡೆಸಿದರು 

   

–ಪ್ರಜಾವಾಣಿ ಚಿತ್ರ/ಎಸ್‌.ಕೆ. ದಿನೇಶ್

ಬೆಂಗಳೂರು: ಶ್ರೇಯಸ್ ಅಯ್ಯರ್ ನಾಯಕತ್ವದ ಮುಂಬೈ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ನೇತೃತ್ವದ ಬರೋಡಾ ತಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 

ADVERTISEMENT

ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಮುಂಬೈ ತಂಡವು 6 ವಿಕೆಟ್‌ಗಳಿಂದ ವಿದರ್ಭ ಎದುರು ಜಯಿಸಿತು. ಬರೋಡಾ ತಂಡವು 41 ರನ್‌ಗಳಿಂದ ಬಂಗಾಳ ವಿರುದ್ಧ ಗೆದ್ದಿತು. 

ನಗರದ ಹೊರವಲಯದಲ್ಲಿರುವ  ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ  ರಹಾನೆ (84; 45ಎ, 4X10, 6X3) ಗೆಲುವಿನ ರೂವಾರಿಯಾದರು.  ಟಾಸ್ ಗೆದ್ದ ಮುಂಬೈ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿದರ್ಭ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 221 ರನ್ ಗಳಿಸಿತು. ಈ ಬೃಹತ್ ಗುರಿಯನ್ನು ಮುಂಬೈ ತಂಡವು 19.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಾಟಿತು. ಅಜಿಂಕ್ಯ ಮತ್ತು ಒಂದು ರನ್ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡ ಪೃಥ್ವಿ ಶಾ (49; 26ಎ, 4X5, 6X4) ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ ಏಳು ಓವರ್‌ಗಳಲ್ಲಿ 83 ರನ್‌ ಕಲೆಹಾಕಿದರು. ಇದರಿಂದಾಗಿ ತಂಡವು ಇನಿಂಗ್ಸ್‌ನಲ್ಲಿ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ಗುರಿ ಮುಟ್ಟಿತು. 

ಆರಂಭಿಕ ಜೋಡಿ ಅಥರ್ವ ತೈಡೆ (66; 41ಎ, 4X10, 6X1) ಮತ್ತು ಕರುಣ್ ನಾಯರ್ (26; 15ಎ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 5.3 ಓವರ್‌ಗಳಲ್ಲಿ 60 ರನ್ ಕಲೆಹಾಕಿದರು.  ಅಪೂರ್ವ ವಾಂಖೆಡೆ (51; 33ಎ) ಕೂಡ ಅರ್ಧಶತಕ ಹೊಡೆದರು. 

ಹಾರ್ದಿಕ್–ಮೆರಿವಾಲಾ ಮಿಂಚು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಬರೋಡಾ ತಂಡವು 41 ರನ್‌ಗಳಿಂದ ಬಂಗಾಳ ಎದುರು ಗೆದ್ದಿತು. ಹಾರ್ದಿಕ್ ಪಾಂಡ್ಯ ಮತ್ತು ಲುಕ್ಮನ್ ಮೆರಿವಾಲ ತಲಾ ಮೂರು ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾದರು. 

ಮತ್ತೊಂದು ಪಂದ್ಯದಲ್ಲಿ ವೆಂಕಟೇಶ್ ಅಯ್ಯರ್ ಆಲ್‌ರೌಂಡ್ ಆಟದಿಂದ ಮಧ್ಯಪ್ರದೇಶ ತಂಡವು 6 ವಿಕೆಟ್‌ಗಳಿಂದ ಸೌರಾಷ್ಟ್ರ ಎದುರು ಗೆದ್ದಿತು. 

ಸಂಕ್ಷಿಪ್ತ ಸ್ಕೋರುಗಳು

ಆಲೂರು ಕ್ರೀಡಾಂಗಣ: ವಿದರ್ಭ: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 221 (ಅಥರ್ವ ತೈಡೆ 66, ಕರುಣ್ ನಾಯರ್ 26, ಅಪೂರ್ವ ವಾಂಖೆಡೆ 51, ಶುಭಂ ದುಬೆ ಔಟಾಗದೆ 43, ಅಥರ್ವ ಅಂಕೋಲೆಕರ್ 32ಕ್ಕೆ2, ಸೂರ್ಯಾಂಶ್ ಶೆಡ್ಗೆ 36ಕ್ಕೆ2) ಮುಂಬೈ: 19.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 224 (ಪೃಥ್ವಿ ಶಾ 49, ಅಜಿಂಕ್ಯ ರಹಾನೆ 84, ಶಿವಂ ದುಬೆ ಔಟಾಗದೆ 37, ಸೂರ್ಯಾಂಶ್ ಶೆಡಗೆ ಔಟಾಗದೆ 36, ದೀಪೇಶ್ ಪರವಾನಿ 33ಕ್ಕೆ2) ಫಲಿತಾಂಶ: ಮುಂಬೈ ತಂಡಕ್ಕೆ 6 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಅಜಿಂಕ್ಯ ರಹಾನೆ.

ಸೌರಾಷ್ಟ್ರ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 173 (ಚಿರಾಗ್ ಜಾನಿ ಔಟಾಗದೆ 80, ಆವೇಶ್ ಖಾನ್ 61ಕ್ಕೆ2, ವೆಂಕಟೇಶ್ ಅಯ್ಯರ್ 23ಕ್ಕೆ2) ಮಧ್ಯಪ್ರದೇಶ: 19.2 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 174 (ಅರ್ಪಿತ್ ಗೌಡ 42, ಸುಧ್ರಾಂಶು ಸೇನಾಪತಿ 24, ವೆಂಕಟೇಶ್ ಅಯ್ಯರ್ ಔಟಾಗದೆ 38, ರಜತ್ ಪಾಟೀದಾರ್ 28, ಹರಪ್ರೀತ್ ಸಿಂಗ್ ಭಾಟಿಯಾ ಔಟಾಗದೆ 22) ಫಲಿತಾಂಶ:ಮಧ್ಯಪ್ರದೇಶ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ವೆಂಕಟೇಶ್ ಅಯ್ಯರ್.

ಚಿನ್ನಸ್ವಾಮಿ ಕ್ರೀಡಾಂಗಣ: ಬರೋಡಾ: 20 ಓವರ್‌ಗಳಲ್ಲಿ 7ಕ್ಕೆ172 (ಶಾಶ್ವತ್ ರಾವತ್ 40, ಅಭಿಮನ್ಯು ಸಿಂಗ್ 37, ಶಿವಾಲಿಕ್ ಶರ್ಮಾ 24, ಮೊಹಮ್ಮದ್ ಶಮಿ 43ಕ್ಕೆ2, ಕನಿಷ್ಕ ಸೇಠ್ 39ಕ್ಕೆ2, ಪ್ರದಿಪ್ತ ಪ್ರಾಮಾಣಿಕ್ 6ಕ್ಕೆ2) ಬಂಗಾಳ: 18 ಓವರ್‌ಗಳಲ್ಲಿ 131 (ಅಭಿಷೇಕ್ ಪೊರೆಲ್ 22, ಋತ್ವಿಕ್ ಚೌಧರಿ 29, ಶಹಬಾಜ್ ಅಹಮದ್ 55, ಹಾರ್ದಿಕ್ ಪಾಂಡ್ಯ 27ಕ್ಕೆ3, ಲುಕ್ಮನ್ ಮೆರಿವಾಲಾ 17ಕ್ಕೆ3, ಅತಿಥ್ ಶೇಠ್ 41ಕ್ಕೆ3) ಫಲಿತಾಂಶ: ಬರೋಡಾ ತಂಡಕ್ಕೆ 41 ರನ್‌ಗಳ ಜಯ. ಪಂದ್ಯಶ್ರೇಷ್ಠ: ಲುಕ್ಮನ್ ಮೆರಿವಾಲಾ.

ಅಜಿಂಕ್ಯ ರಹಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.