ADVERTISEMENT

ಭಯೋತ್ಪಾದನೆ | ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ನಿರಾಕರಿಸಿದ ಲಂಕಾ ಕ್ರಿಕೆಟಿಗರು

ರಾಯಿಟರ್ಸ್
Published 9 ಡಿಸೆಂಬರ್ 2019, 13:04 IST
Last Updated 9 ಡಿಸೆಂಬರ್ 2019, 13:04 IST
   

ಕೊಲೊಂಬೊ: ಪಾಕಿಸ್ತಾನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನ ಕೃತ್ಯಗಳ ಹಿನ್ನೆಲೆಯಲ್ಲಿ ಭದ್ರತೆಯ ವಿಷಯವಾಗಿ ಆತಂಕಗೊಂಡಿರುವ ಶ್ರೀಲಂಕದ ಕ್ರಿಕೆಟಿಗರು ಪಾಕ್‌ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಶ್ರೀಲಂಕ ತಂಡ ಇದೇ ತಿಂಗಳ 27 ರಿಂದ ಅಕ್ಟೋಬರ್‌ 9ರ ಅವಧಿಯಲ್ಲಿ ಮೂರು ಏಕದಿನ ಪಂದ್ಯ, ಮೂರು ಟಿ–20 ಪಂದ್ಯಗಳನ್ನು ಆಡಲು ಪಾಕಿಸ್ತಾನಕ್ಕೆ ತೆರಳಬೇಕಾಗಿದೆ. ಪ್ರವಾಸಕ್ಕೆ ಸಂಬಂಧಿಸಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಚರ್ಚಿಸಲು ಶ್ರೀಲಂಕ ಕ್ರಿಕೆಟ್‌ ಮಂಡಳಿಯು ಆಟಗಾರರ ಜೊತೆ ಸಭೆ ನಡೆಸಿತು. ಈ ವೇಳೆ ಪ್ರಾಥಮಿಕವಾಗಿ ಭದ್ರತಾ ವ್ಯವಸ್ಥೆಯ ಬಗ್ಗೆ ಆಟಗಾರರಿಗೆ ವಿವರಿಸಲಾಗಿದೆ. ಅಲ್ಲದೆ, ಪ್ರವಾಸದಲ್ಲಿ ಪಾಲ್ಗೊಳ್ಳುವ ಅಥವಾ ಹೊರಗುಳಿಯುವ ಸ್ವಾತಂತ್ರ್ಯವನ್ನು ಆಟಗಾರರಿಗೆ ನೀಡಲಾಗಿದೆ ಎಂದು ಶ್ರೀಲಂಕ ಕ್ರಿಕೆಟ್‌ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ. ಅಲ್ಲದೆ, ಹತ್ತು ಮಂದಿ ಆಟಗಾರರು ಪಾಕಿಸ್ತಾನ ಪ್ರವಾಸದಿಂದ ಹೊರಗುಳಿಯಲು ತೀರ್ಮಾನಿಸಿದ್ದಾರೆ ಎಂದು ಮಂಡಳಿ ಹೇಳಿದೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳಲೆಂದು 2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕ ತಂಡದ ಮೇಲೆ ಲಾಹೋರ್‌ನಲ್ಲಿ ಭಯೋತ್ಪಾದನಾ ದಾಳಿ ನಡೆದಿತ್ತು. ಇದಾದ ನಂತರ ಪಾಕಿಸ್ತಾನದ ನೆಲದಲ್ಲಿ ಕ್ರಿಕೆಟ್‌ ಆಡಲು ಹಲವು ರಾಷ್ಟ್ರಗಳು ಹಿಂದೇಟು ಹಾಕಿವೆ. ಈ ದುಗುಡದ ವಾತಾವರಣ ಈ ವರೆಗೆ ನಿವಾರಣೆಯಾಗಿಲ್ಲ. ಈ ಮಧ್ಯೆ 2017ರಲ್ಲಿ ಶ್ರೀಲಂಕ ತಂಡ ಪಾಕಿಸ್ತಾನದ ಲಾಹೋರ್‌ಲ್ಲಿ ಟಿ20 ಸರಣಿಯಲ್ಲಿ ಭಾಗವಹಿಸಿತ್ತು. ಆಗ ಪೆರೆರಾ ಅವರು ತಂಡವನ್ನು ಮುನ್ನಡೆಸಿದ್ದರು. ಆದರೀಗ ಪರೆರಾ ಅವರೇ ಪ್ರವಾಸದಿಂದ ಹೊರಗುಳಿಯುವ ತೀರ್ಮಾನ ಮಾಡಿದ್ಧಾರೆ.

ADVERTISEMENT

ಸದ್ಯ 27ರಿಂದ ಪಾಕಿಸ್ತಾನದ ಕರಾಚಿಯಲ್ಲಿ ಆರಂಭವಾಗುತ್ತಿರುವ ಕ್ರಿಕೆಟ್‌ ಸರಣಿಯನ್ನು ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಅನ್ನು ಪುನಶ್ಚೇತನಗೊಳಿಸುವ ಕಡೆಗಿನ ಪ್ರಧಾನ ನಡೆ ಎಂದು ಬಣ್ಣಿಸಲಾಗಿತ್ತು. ಆದರೆ, ಶ್ರೀಲಂಕ ಆಟಗಾರರ ಈ ನಡೆಯಿಂದಾಗಿ ಪಾಕಿಸ್ತಾನಕ್ಕೆ ಮುಜುಗರ ಉಂಟಾಗಿದೆ.

2009ರಲ್ಲಿ ಏನಾಗಿತ್ತು?

ಲಾಹೋರ್‌ನ ಖಡಾಫಿ ಸ್ಟೇಡಿಯಂನ ಲಿಬರ್ಟಿ ಚೌಕದ ಬಳಿ ಶ್ರೀಲಂಕಾ ಕ್ರಿಕೆಟ್‌ ತಂಡವನ್ನು ಕರೆದೊಯ್ಯುತ್ತಿದ್ದ ಬಸ್‌ ಮೇಲೆ 2009 ಮಾರ್ಚ್‌ನಲ್ಲಿ ತಾಲಿಬಾನ್‌ ಮತ್ತು ಎಲ್‌ಇಜೆ ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಗ್ರೆನೇಡ್‌ಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು.
ಈ ದಾಳಿಯಲ್ಲಿ ಆಟಗಾರರಾದ ಮಹೆಲಾ ಜಯವರ್ಧನೆ, ಕುಮಾರ ಸಂಗಕ್ಕಾರ, ಅಜಂತಾ ಮೆಂಡಿಸ್‌, ತಿಲನ್‌ ಸಮರವೀರ, ತರಂಗ ಪರನವಿತಾನ ಮತ್ತು ಚಮಿಂದಾ ವಾಸ್‌ ಗಾಯಗೊಂಡರೆ, ಬೆಂಗಾವಲು ಒದಗಿಸುತ್ತಿದ್ದ ಆರು ಪಾಕ್‌ ಪೊಲೀಸರು ಹತರಾಗಿದ್ದರು.

ಪ್ರವಾಸದಿಂದ ಹೊರಗುಳಿದವರು

ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೆರಾ, ನಿರೋಶನ ದಿಕ್ವೆಲ್ಲಾ, ಕುಶಾಲ ಪೆರೆರಾ, ಧನಂಜಯ ಡಿಸಿಲ್ವಾ, ಅಕಿಲ ಧಜಂಜಯ, ಸುರಂಗಾ ಲಕ್ಮಲ್‌, ದಿನೇಶ್‌ ಚಾಂಡಿಮಲ್‌, ದಿಮುತ ಕರುಣಾರತ್ನೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.