
ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಜೊತೆಗೆ ಸಚಿನ್ ತೆಂಡೂಲ್ಕರ್
ಪಿಟಿಐ ಚಿತ್ರ
ಮುಂಬೈ: ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿ ಕರ್ನಾಟಕ ತಂಡದ ಎದುರು ಆಡಲಿರುವ ಮುಂಬೈ ಕ್ರಿಕೆಟ್ ತಂಡದೊಂದಿಗೆ ‘ಬ್ಯಾಟಿಂಗ್ ಚಾಂಪಿಯನ್’ ಸಚಿನ್ ತೆಂಡೂಲ್ಕರ್ ಸಂವಾದ ನಡೆಸಿದರು. ಪಂದ್ಯದಲ್ಲಿ ಎದುರಾಗುವ ಒತ್ತಡವನ್ನು ನಿಭಾಯಿಸುವುದು ಎಂಬ ಬಗ್ಗೆ ಸಲಹೆ ನೀಡಿದರು.
ಇದೇ 6 ರಿಂದ 10ರವರೆಗೆ ಪಂದ್ಯ ನಡೆಯಲಿರುವ ಬಿಕೆಸಿ ಕ್ರೀಡಾಂಗಣದಲ್ಲಿ ಬುಧವಾರ ಮುಂಬೈ ಆಟಗಾರರೊಂದಿಗೆ ಸಚಿನ್ ಮಾತನಾಡಿದರು. ಆಟಗಾರರು ಮತ್ತು ನೆರವು ಸಿಬ್ಬಂದಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
‘ಇವತ್ತು ನಮ್ಮ ಡ್ರೆಸಿಂಗ್ ಕೋಣೆಗೆ ಸಚಿನ್ ತೆಂಡೂಲ್ಕರ್ ಬಂದಿದ್ದರು. ಅವರೊಂದಿಗೆ ಸಂವಾದ ನಡೆಸುವ ಭಾಗ್ಯ ನಮಗೆ ಒಲಿದಿದ್ದು ಸಂತಸ ತಂದಿದೆ. ಅದು ಚುಟುಕು ಮಾತುಕತೆಗಿಂತ ಪ್ರಶ್ನೋತ್ತರವಾಗಿತ್ತು. ಆಟಗಾರರು ಮತ್ತು ಕೋಚ್ಗಳು ತರಹೇವಾರಿ ಪ್ರಶ್ನೆಗಳನ್ನು ಕೇಳಿದರು. ಸಿದ್ಧತೆ, ಗೆಲ್ಲುವ ಛಲದ ಮನೋಭಾವ, ಒತ್ತಡ ನಿರ್ವಹಣೆ ಮತ್ತು ದೃಷ್ಟಿಕೋನದ ಕುರಿತ ಪ್ರಶ್ನೆಗಳನ್ನು ಕೇಳಿದರು’ ಎಂದು ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸಚಿನ್ ಸರ್, ಸಲಹೆಗಳು ಈಹಿಂದೆಯೂ ಮುಂಬೈ ತಂಡಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟಿವೆ. ಅವರೊಂದಿಗಿನ ಮಾತುಕತೆಯಿಂದ ತಂಡದ ಅಟಗಾರರು ತುಂಬಾ ಖುಷಿಪಟ್ಟಿದ್ದಾರೆ. ಅವರ ವಿಶ್ವಾಸವೂ ಹೆಚ್ಚಿದೆ. ಸರ್ವಶ್ರೇಷ್ಠ ಆಟಗಾರನಿಂದ ಸಲಹೆಗಳನ್ನು ಪಡೆದಿದ್ದೇವೆ’ ಎಂದು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹೇಳಿದರು.