ADVERTISEMENT

ಅಫ್ರಿದಿ ಮತ್ತು ಗಂಭೀರ್‌ ಜವಾಬ್ದಾರಿಯಿಂದ ವರ್ತಿಸಲಿ: ವಕಾರ್‌ ಯೂನಿಸ್‌

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಹೇಳಿಕೆ

ಪಿಟಿಐ
Published 1 ಜೂನ್ 2020, 19:30 IST
Last Updated 1 ಜೂನ್ 2020, 19:30 IST
ವಕಾರ್‌ ಯೂನಿಸ್‌ 
ವಕಾರ್‌ ಯೂನಿಸ್‌    

ನವದೆಹಲಿ: ‘ಪಾಕಿಸ್ತಾನದ ಶಾಹೀದ್‌ ಅಫ್ರಿದಿ ಹಾಗೂ ಭಾರತದ ಗೌತಮ್‌ ಗಂಭೀರ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಪರಸ್ಪರ ಟೀಕೆ ಮಾಡುವುದನ್ನೂ ನಿಲ್ಲಿಸಬೇಕು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ವಕಾರ್‌ ಯೂನಿಸ್‌ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಫ್ರಿದಿ ಹಾಗೂ ಗಂಭೀರ್ ಅವರು ರಾಜಕೀಯ ಹಾಗೂ ವೈಯಕ್ತಿಕ ವಿಚಾರಗಳ ಕುರಿತು ಟ್ವಿಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಕಾಲೆಳೆಯುವುದು ಸಾಮಾನ್ಯವಾಗಿದೆ.

ಗಂಭೀರ್ ಸೊಕ್ಕಿನ ಮನುಷ್ಯ. ಅವರ ವರ್ತನೆಯೇ ಸರಿಯಿಲ್ಲ. ಅವರು ಕ್ರಿಕೆಟ್‌ನಲ್ಲಿ ಹೇಳಿಕೊಳ್ಳುವಂತಹ ದಾಖಲೆಗಳನ್ನೇನೂ ನಿರ್ಮಿಸಿಲ್ಲ ಎಂದು ಅಫ್ರಿದಿ ಅವರು ತಮ್ಮ ಆತ್ಮಚರಿತ್ರೆ ‘ಗೇಮ್‌ ಚೇಂಜರ್‌’ನಲ್ಲಿ ಬರೆದಿದ್ದರು. ಇದಕ್ಕೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದ ಗಂಭೀರ್‌, ಅಫ್ರಿದಿಗೆ ತಲೆ ಕೆಟ್ಟಿದೆ. ಅವರನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ನಾನೇ ಚಿಕಿತ್ಸೆ ಕೊಡಿಸುತ್ತೇನೆ ಎಂದಿದ್ದರು.

ADVERTISEMENT

‘ಗಂಭೀರ್‌ ಮತ್ತು ಅಫ್ರಿದಿ ಹಿಂದಿನಿಂದಲೂ ವಾಕ್ಸಮರದಲ್ಲಿ ತೊಡಗಿಕೊಂಡಿದ್ದಾರೆ. ಅವರಿಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಂವೇದನಾಶೀಲತೆಯಿಂದ ವರ್ತಿಸಬೇಕಿದೆ. ಎಂತಹುದೇ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೇ ಶಾಂತವಾಗಿರಬೇಕು’ ಎಂದು ಪಾಕಿಸ್ತಾನ ತಂಡದ ಬೌಲಿಂಗ್‌ ಕೋಚ್‌ ಕೂಡ ಆಗಿರುವ ವಕಾರ್‌ ಹೇಳಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಮ್ಮ ಹೇಳಿಕೆಗಳು ವಿವಾದಕ್ಕೆ ಎಡೆಮಾಡಿಕೊಡುವಂತಿರಬಾರದು. ಮತ್ತೊಬ್ಬರು ನಮ್ಮನ್ನು ಗೇಲಿಮಾಡಿಕೊಂಡು ನಗುವುದಕ್ಕೆ ನಾವೇ ದಾರಿಮಾಡಿಕೊಡಬಾರದು’ ಎಂದೂ ಅವರು ನುಡಿದಿದ್ದಾರೆ.

‘ಇಬ್ಬರೂ ಯಾವುದಾದರೂ ಒಂದು ಸ್ಥಳದಲ್ಲಿ ಮುಖಾಮುಖಿ ಭೇಟಿಯಾಗಬೇಕು. ಪರಸ್ಪರ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ವೈರತ್ವ ಮರೆತು ಸೌಹಾರ್ದಯುತವಾಗಿ ಜೀವನ ಸಾಗಿಸಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

‘ರಾಜತಾಂತ್ರಿಕ ಕಾರಣಗಳಿಂದಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಯುತ್ತಿಲ್ಲ. ಉಭಯ ತಂಡಗಳು ದ್ವಿಪಕ್ಷೀಯ ಸರಣಿ ಆಡಬೇಕು. ಅದಕ್ಕೆ ‘ಇಂಡಿಪೆಂಡೆಂಟ್ಸ್‌ ಸೀರಿಸ್’‌,‘ಇಮ್ರಾನ್‌–ಕಪಿಲ್‌ ಸೀರಿಸ್‌’ ಅಥವಾ ಮತ್ತೇನಾದರೂ ಹೆಸರಿಡಬಹುದು. ಎರಡು ದೇಶಗಳ ಜನರೂ ಇದನ್ನು ಬಯಸುತ್ತಿದ್ದಾರೆ. ಇದರಿಂದ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯವೂ ಸುಧಾರಿಸುತ್ತದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಉಭಯ ದೇಶಗಳ ನಡುವೆ ಶೀಘ್ರವೇ ದ್ವಿಪಕ್ಷೀಯ ಸರಣಿ ನಡೆಯುತ್ತದೆ ಎಂಬ ವಿಶ್ವಾಸ ನನಗಂತೂ ಖಂಡಿತ ಇದೆ. ಅದು ಭಾರತದಲ್ಲಾದರೂ ಆಗಬಹುದು ಅಥವಾ ಪಾಕಿಸ್ತಾನದಲ್ಲೇ ನಡೆಯಬಹುದು. ತಟಸ್ಥ ಸ್ಥಳದಲ್ಲಿ ಆಡುವುದು ಬೇಡ. ಅದನ್ನು ಯಾರೂ ಬಯಸುವುದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.