ADVERTISEMENT

ಬೂಮ್ರಾ ಫಿಟ್‌ನೆಸ್ ಪರೀಕ್ಷೆಗೆ ನಕಾರ: ದ್ರಾವಿಡ್ ಜೊತೆ ಮಾತಾಡುವೆ ಎಂದ ಗಂಗೂಲಿ

ಫಿಟ್‌ನೆಸ್‌ ಪರೀಕ್ಷೆಗೆ ನಡೆಸಲು ಎನ್‌ಸಿಎ ನಿರಾಕರಿಸಿದೆ

ಏಜೆನ್ಸೀಸ್
Published 20 ಡಿಸೆಂಬರ್ 2019, 12:16 IST
Last Updated 20 ಡಿಸೆಂಬರ್ 2019, 12:16 IST
   

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ಫಿಟ್‌ನೆಸ್‌ ಪರೀಕ್ಷೆಗೆ ನಿರಾಕರಿಸಿದ್ದರ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಧ್ಯಕ್ಷ ರಾಹುಲ್‌ ದ್ರಾವಿಡ್‌ ಜೊತೆ ಮಾತನಾಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

‘ಇದಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯುತ್ತೇನೆ. ಪ್ರತಿಯೊಬ್ಬ ಅಂತರರಾಷ್ಟ್ರೀಯ ಕ್ರಿಕೆಟಿಗನಿಗೂ ಎನ್‌ಸಿಎಯಲ್ಲಿ ಆದ್ಯತೆ ಸಿಗಬೇಕು. ನಾನು ಅಧಿಕಾರಕ್ಕೇರಿದ ಕೆಲವು ತಿಂಗಳ ಬಳಿಕ ಹೀಗಾಗಿದೆ. ರಾಹುಲ್‌ ದ್ರಾವಿಡ್ ಜೊತೆಗೆ ಮಾತನಾಡುತ್ತೇನೆ. ಇದುವರೆಗೆ ಕೆಲವು ಸಲ ಮಾತ್ರ ನಾವಿಬ್ಬರುಭೇಟಿಯಾಗಿದ್ದೇವೆ. ಸಮಸ್ಯೆ ಏನು ಎಂಬುದನ್ನು ಅರ್ಥಮಾಡಿಕೊಂಡು ಬಗೆಹರಿಸುತ್ತೇವೆ’ ಎಂದು ಹೇಳಿದ್ದಾರೆ.

‘ಗಾಯಾಳಾಗಿದ್ದ ಬೂಮ್ರಾ ಅವರನ್ನು ವಿಶ್ರಾಂತಿಗೆ ಕಳುಹಿಸಲಾಗಿತ್ತು. ಆಗ ನಾನು ಅಧಿಕಾರದಲ್ಲಿರಲಿಲ್ಲ ಮತ್ತು ಆಗ ಏನಾಗಿತ್ತು ಎಂಬುದೂ ನನಗೆ ತಿಳಿದಿಲ್ಲ. ಆದರೆ, ಎನ್‌ಸಿಎ ಇರುವುದೇ ಭಾರತದ ಕ್ರಿಕೆಟಿಗರಿಗಾಗಿ. ಪ್ರತಿಯೊಂದೂ ಎನ್‌ಸಿಎ ಮೂಲಕವೇ ನಡೆಯಬೇಕು’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ (ಸೆಪ್ಟೆಂಬರ್ ತಿಂಗಳಲ್ಲಿ) ಬೂಮ್ರಾ ಅವರ ಬೆನ್ನು ಮೂಳೆ ಮುರಿದಿರುವುದು ತಿಳಿದು ಬಂದಿತ್ತು. ಹೀಗಾಗಿ ಅವರು ಸುದೀರ್ಘ ಎರಡು ತಿಂಗಳ ವಿಶ್ರಾಂತಿ ಬಳಿಕ ಅಭ್ಯಾಸಕ್ಕೆ ಮರಳಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಅವರು ವಿಶಾಖಪಟ್ಟಣದಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದರು.

ಆದರೆ, ಅವರಿಗೆ ಫಿಟ್‌ನೆಸ್‌ ಪರೀಕ್ಷೆ ನಡೆಸಲು ಎನ್‌ಸಿಎ ನಿರಾಕರಿಸಿದೆ. ಈ ಸಂಬಂಧ ಬೂಮ್ರಾ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿದ್ದ ಸಂದರ್ಭದಲ್ಲಿ ಬೂಮ್ರಾ ವೈಯಕ್ತಿಕ ತಜ್ಞರ ಸಲಹೆ ಮೇರೆಗೆ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅವರಿಗೆ ಫಿಟ್‌ನೆಸ್‌ ಪರೀಕ್ಷೆ ನಡೆಸಲು ಎನ್‌ಸಿಯ ನಿರಾಕರಿಸಿದೆ ಎಂದೂ ವರದಿಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.