ADVERTISEMENT

133 ಜನರು ಮೃತಪಟ್ಟಿದ್ದ ಇಂಡೋನೇಷ್ಯಾ ಪುಟ್ಬಾಲ್‌ ಕ್ರೀಡಾಂಗಣ ಕೆಡವಲು ನಿರ್ಧಾರ

ಏಜೆನ್ಸೀಸ್
Published 18 ಅಕ್ಟೋಬರ್ 2022, 12:46 IST
Last Updated 18 ಅಕ್ಟೋಬರ್ 2022, 12:46 IST
ದುರಂತ ನಡೆದ ಕ್ರೀಡಾಂಗಣ
ದುರಂತ ನಡೆದ ಕ್ರೀಡಾಂಗಣ    

ಜಕಾರ್ತ: ಕಾಲ್ತುಳಿತದಲ್ಲಿ 133 ಜನರು ಮೃತಪಟ್ಟ ಧಾರುಣ ಘಟನೆಗೆ ಸಾಕ್ಷಿಯಾದ ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣವನ್ನು ಕೆಡವಿ, ಮರುನಿರ್ಮಾಣ ಮಾಡಲಾಗುವುದು ಎಂದು ಇಂಡೊನೇಷ್ಯಾ ಅಧ್ಯಕ್ಷರು ಮಂಗಳವಾರ ಹೇಳಿದ್ದಾರೆ.

‘ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣವನ್ನು ಕೆಡವಿ, ಫೀಫಾ ಮಾನದಂಡಗಳಿಗೆ ಅನುಗುಣವಾಗಿ ಪುನರ್‌ನಿರ್ಮಾಣ ಮಾಡುತ್ತೇವೆ’ ಎಂದು ಜೋಕೊ ವಿಡೋಡೊ ಸುದ್ದಿಗಾರರಿಗೆ ತಿಳಿಸಿದರು. ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಅವರನ್ನು ಭೇಟಿಯಾದ ನಂತರ ಅವರು ಈ ನಿರ್ಧಾರ ಪ್ರಕಟಿಸಿದರು.

ಅಕ್ಟೋಬರ್ 1 ರಂದು ಮಲಾಂಗ್ ನಗರದ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಆಗಿದ್ದ ಕಾಲ್ತುಳಿತದಲ್ಲಿ 40 ಕ್ಕೂ ಹೆಚ್ಚು ಮಕ್ಕಳೂ ಸಾವಿಗೀಡಾಗಿದ್ದರು. ಈ ದುರ್ಘಟನೆಯನ್ನು ಇನ್‌ಫ್ಯಾಂಟಿನೊ ಅವರು ‘ಫುಟ್‌ಬಾಲ್‌ ರಂಗದ ಕರಾಳ ದಿನ’ ಎಂದು ಹೇಳಿದ್ದರು.

ADVERTISEMENT

ಅರೆಮಾ ಎಫ್‌ಸಿ ಮತ್ತು ಪ್ರತಿಸ್ಪರ್ಧಿಗಳಾದ ಪರ್ಸೆಬಯಾ ಸುರಬಯಾ ನಡುವಿನ ಲೀಗ್ ಪಂದ್ಯದ ಕೊನೆಯಲ್ಲಿ ಬೆಂಬಲಿಗರು ಕ್ರೀಡಾಂಗಣಕ್ಕೆ ಲಗ್ಗೆ ಇಟ್ಟಿದ್ದರು. ಪ್ರೇಕ್ಷಕರಿಂದ ತುಂಬಿದ್ದ ಸ್ಟ್ಯಾಂಡ್‌ಗಳತ್ತ ಪೊಲೀಸರು ಅಶ್ರುವಾಯು ಹಾರಿಸಿದ್ದರು. ಹೀಗಾಗಿ ಕಾಲ್ತುಳಿತ ಆಗಿತ್ತು.

‘ಆಟಗಾರರ ಮತ್ತು ಪ್ರೇಕ್ಷಕರ ಸುರಕ್ಷತೆ ಹೊಂದಿರುವ ಸೂಕ್ತ ಸೌಲಭ್ಯಗಳುಳ್ಳ ಕ್ರೀಡಾಂಗಣವನ್ನು ಅದೇ ಜಾಗದಲ್ಲಿ ನಿರ್ಮಿಸಲಾಗುವುದು ಎಂದು ವಿಡೋಡೊ ಹೇಳಿದ್ದಾರೆ.

ಇಂಡೊನೇಷಿಯನ್ ಫುಟ್‌ಬಾಲ್ ಅನ್ನು ಸುಧಾರಿಸಲು ಮತ್ತು ರೂಪಾಂತರ ಮಾಡಲು ಫಿಫಾ ನೆರವಾಗಲಿದೆ ಎಂದು ಇನ್‌ಫ್ಯಾಂಟಿನೊ ಹೇಳಿದ್ದಾರೆ.

2004 ರಲ್ಲಿ ತೆರೆಯಲಾದ 42,000 ಸಾಮರ್ಥ್ಯದ ಕಂಜುರುಹಾನ್ ಕ್ರೀಡಾಂಗಣದ ಗೇಟ್‌ಗಳಲ್ಲಿ ಒಂದು ಬಾರಿಗೆ ಇಬ್ಬರು ಮಾತ್ರ ಒಳ/ಹೊರ ಹೋಗಲು ಸಾಧ್ಯ. ದುರ್ಘಟನೆ ಸಂಭವಿಸಿದಾಗ ಸಮಯಕ್ಕೆ ಸರಿಯಾಗಿ ಈ ಗೇಟುಗಳನ್ನು ತೆರೆದಿರಲೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲಸೌಕರ್ಯ ಕೊರತೆ, ಅಸಮರ್ಪಕ ನಿರ್ವಹಣೆ, ಹೊರಹೋಗಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೇರಿ ಹಲವು ಕಾರಣಗಳಿಂದಾಗಿ ಇಂಡೋನೇಷ್ಯಾದ ಕ್ರೀಡಾಂಗಣಗಳಲ್ಲಿ 1990ರಿಂದಲೂ ಹಲವು ಸಾವುಗಳು ಸಂಭವಿಸಿವೆ ಎಂದು ತಜ್ಞರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.