ವಾಷಿಂಗ್ಟನ್ (ಪಿಟಿಐ): ಚಂದ್ರನ ಧ್ರುವಗಳ ಕಗ್ಗತ್ತಲ ಹಾಗೂ ತಂಪಾದ ಪ್ರದೇಶಗಳಲ್ಲಿ ಘನೀಕೃತ ರೂಪದಲ್ಲಿ ನೀರಿನ ಸಂಗ್ರಹವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 10 ವರ್ಷಗಳ ಹಿಂದೆ ಭಾರತ ಉಡ್ಡಯನ ಮಾಡಿದ್ದ ಚಂದ್ರಯಾನ–1 ನೌಕೆಯ ದತ್ತಾಂಶಗಳನ್ನು ಆಧರಿಸಿ ಇದನ್ನು ದೃಢಪಡಿಸಿದ್ದಾರೆ.
ಚಂದ್ರನ ಮೇಲ್ಮೈನ ಕೆಲವು ಮಿಲಿಮೀಟರ್ನಲ್ಲಿ ಮಾತ್ರ ಮಂಜುಗಡ್ಡೆಯ ದಾಸ್ತಾನಿದ್ದು, ಅದರಿಂದ ನೀರು ಲಭ್ಯವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಭವಿಷ್ಯದ ಗಗನಯಾನಗಳಿಗೆ ಇದು ಮುಖ್ಯ ಸಂಪನ್ಮೂಲವಾಗಲಿದೆ. ಇದು ಗ್ರಹದ ಮೇಲ್ಮೈನಲ್ಲಿ ಚದುರಿದಂತೆ ಹರಡಿಕೊಂಡಿದ್ದು, ಪುರಾತನವಾದ ಸಂಗ್ರಹವಾಗಿರಬಹುದು ಎಂದು ಅಂದಾಜಿಸಿದ್ದಾರೆ.
ದಕ್ಷಿಣ ಧ್ರುವದ ಚಂದ್ರನ ಕುಳಿಗಳಲ್ಲಿ ಘನೀಕೃತ ರೂಪ ಅಡಗಿದೆ. ಉತ್ತರ ಧ್ರುವದಲ್ಲಿ ಅಲ್ಲಲ್ಲಿ ಚದುರಿದೆ. ಚಂದ್ರನ ತಿರುಗುವ ಅಕ್ಷವು ಕೊಂಚ ಓರೆಯಾದ ಕಾರಣ ಈ ಪ್ರದೇಶಗಳಲ್ಲಿ ಸೂರ್ಯನ ಬೆಳಕು ಅಷ್ಟಾಗಿ ತಾಗಿಲ್ಲ.
ಚಂದ್ರಯಾನ ನೌಕೆಯಲ್ಲಿ ಅಳವಡಿಸಿದ್ದ ನಾಸಾದ ‘ಮೂನ್ ಮಿನರಾಲಜಿ ಮ್ಯಾಪರ್’ (ಎಂ3) ಎಂಬ ಸಾಧನವು ಮೂರು ನಿರ್ದಿಷ್ಟ ಕುರುಹುಗಳನ್ನು ಪತ್ತೆಹಚ್ಚಿದ್ದು, ಇಲ್ಲಿ ಖಚಿತವಾಗಿ ನೀರಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕೇವಲ ಮಂಜುಗಡ್ಡೆ ಪ್ರತಿಫಲನಗೊಳ್ಳುವುದನ್ನು ಕಂಡು ಇದನ್ನು ಖಚಿತಪಡಿಸಿಕೊಂಡಿಲ್ಲ. ಅತಿಗೆಂಪು ಬಣ್ಣವನ್ನು ಹೀರಿಕೊಳ್ಳುವ ಕಣಗಳನ್ನು ನೇರವಾಗಿ ಅಳೆಯುವವಿಶಿಷ್ಟ ಮಾರ್ಗ ಅನುಸರಿಸಲಾಗಿದೆ. ದ್ರವರೂಪದ ನೀರು, ಆವಿ ಹಾಗೂ ಘನರೂಪದ ಮಂಜುಗಡ್ಡೆಯ ಮಧ್ಯೆ ವ್ಯತ್ಯಾಸ ಅರಿಯಲು ಸಾಧ್ಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.