
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ಗಳು ಹಾಗೂ ಒಳಚಿತ್ರದಲ್ಲಿ ಟಿಕೆಟ್, ಬೆಕ್ಕು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ನಲ್ಲಿ ಬೆಕ್ಕಿಗೂ ಟಿಕೆಟ್ ನೀಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ತರಹೇವಾರಿ ಚರ್ಚೆ ನಡೆಯುತ್ತಿದೆ.
ಬಸ್ ಟಿಕೆಟ್ ಹಾಗೂ ಬೆಕ್ಕಿನ ಚಿತ್ರಗಳನ್ನು ಹಂಚಿಕೊಂಡಿರುವ ನೆಟ್ಟಿಗರು, ಸಾರಿಗೆ ಸಂಸ್ಥೆ ಹಾಗೂ ನಿರ್ವಾಹಕನ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಕೆಲವರು ಸರ್ಕಾರವನ್ನೂ ಟೀಕಿಸಿದ್ದಾರೆ.
ಫೋಟೊದಲ್ಲಿರುವ ಟಿಕೆಟ್ನಲ್ಲಿ ಬಸ್ಸು ಡಿಸೆಂಬರ್ 26ರಂದು ಮೈಸೂರಿನಿಂದ ಮಡಿಕೇರಿಗೆ ಪ್ರಯಾಣಿಸಿರುವ ಉಲ್ಲೇಖವಿದೆ.
ಇದಕ್ಕೆ ತರಹೇವಾರಿ ಪ್ರತಿಕ್ರಿಯೆಗಳು ಬಂದಿವೆ. 'ಇನ್ಮುಂದೆ ಬೆಕ್ಕಿಗೂ ಪಾಸ್ ಸಿಗಬೇಹುದೇ?' ಎಂದು ಕೆಲವರು ಕೇಳಿದ್ದಾರೆ.
'ಅದನ್ನು (ಬೆಕ್ಕನ್ನು) ಪ್ರಯಾಣಿಕ ಎಂದಾಗಲೂ, ಲಗೇಜ್ ಎಂದಾಗಲೀ ಪರಿಗಣಿಸದಿದ್ದ ಮೇಲೆ, ಟಿಕೆಟ್ ನೀಡಿದ ಉದ್ದೇಶವಾದರೂ ಏನು? ಅದು ತನ್ನ ಮಾಲೀಕನ ತೊಡೆ ಮೇಲೆಯೇ ಕುಳಿತುಕೊಳ್ಳುತ್ತಿತ್ತಲ್ಲಾ?' ಎಂದು ಕೇಳಿದ್ದಾರೆ.
ಇನ್ನೂ ಕೆಲವರು, 'ಮಹಿಳೆಯರಿಗೇ ಉಚಿತ ಪ್ರಯಾಣಕ್ಕೆ ಅವಕಾಶವಿರುವಾಗ, ಬೆಕ್ಕಿಗೆ ಟಿಕೆಟ್ ನೀಡಿದ್ದು ಎಷ್ಟು ಸರಿ?' ಎನ್ನುವ ಮೂಲಕ ರಾಜ್ಯ ಸರ್ಕಾರವನ್ನೂ ಎಳೆದು ತಂದಿದ್ದಾರೆ.
'ಬೆಕ್ಕು ಹೆಣ್ಣಾಗಿದ್ದರೆ, ಉಚಿತವಾಗಿ ಪ್ರಯಾಣಿಸಬಹುದಿತ್ತು' ಎಂಬಿತ್ಯಾದಿ ನಗೆ ಚಟಾಕಿ ಹಾರಿಸಿದವರ ಸಂಖ್ಯೆಯೇನೂ ಕಡಿಮೆ ಇಲ್ಲ.
ನಿಯಮಗಳು ಹೇಳುವುದೇನು?
ಪ್ರಯಾಣಿಕರಿಗೆ ತೊಂದರೆಯಾಗದಂತೆ (ಪ್ಯಾಕ್ಡ್ ವ್ಯವಸ್ಥೆಯಲ್ಲಿ) ಬೆಕ್ಕು ಅಥವಾ ನಾಯಿಯಂತಹ ಸಾಕು ಪ್ರಾಣಿಗಳನ್ನು ಸಾರಿಗೆ ಬಸ್ಗಳಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿದೆ.
ಸೀಟು ಖಾಲಿ ಇದ್ದರೆ ಅಥವಾ ಮಾಲೀಕರ ತೊಡೆ ಮೇಲೆ ಕೂರಿಸಿಕೊಂಡು ಹೋಗುವಂತಿದ್ದರೆ ಟಿಕೆಟ್ ಪಡೆಯಬೇಕಿಲ್ಲ. ಆದರೆ, ಸೀಟುಗಳು ಖಾಲಿಯಿಲ್ಲದಿದ್ದರೂ ಸಾಕು ಪ್ರಾಣಿಯನ್ನು ಸೀಟಿನ ಮೇಲೆ ಕೂರಿಸಿಕೊಂಡು ಹೋಗಬೇಕೆಂದರೆ ಅರ್ಧ ಟಿಕೆಟ್ ತೆಗೆದುಕೊಳ್ಳಲೇಬೇಕು.
'ಈ ಬೆಳವಣಿಗೆ ಹೊಸತೇನೂ ಅಲ್ಲ. ಮಾಲೀಕರು, ಸೀಟು ಬಿಟ್ಟುಕೊಡುವುದಿಲ್ಲ ಎಂದರೆ ನಾಯಿ ಅಥವಾ ಬೆಕ್ಕಿಗೆ ಟಿಕೆಟ್ ಪಡೆಯಬೇಕು ಎಂಬ ನಿಯಮವಿದೆ. ಅದರಂತೆ ಟಿಕೆಟ್ ನೀಡಲಾಗಿದೆ' ಎಂದು ಕೆಎಸ್ಆರ್ಟಿಸಿಯ ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿ ಬಾಬು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.