ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್
ಚಿತ್ರ ಕೃಪೆ:
beingpunekarofficial
ಪುಣೆ: ಸರಿಯಾಗಿ ಸಂಬಳ ನೀಡಿಲ್ಲವೆಂಬ ಕಾರಣ ನೀಡಿ ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಚೇರಿಯ ಹೊರಭಾಗದ ಪಾದಚಾರಿ ಮಾರ್ಗದಲ್ಲಿ ಉದ್ಯೋಗಿಯೊಬ್ಬರು ಮಲಗಿ ಪ್ರತಿಭಟನೆ ನಡೆಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಪಾದಚಾರಿ ಮಾರ್ಗದಲ್ಲಿ ಉದ್ಯೋಗಿ ಮಲಗಿರುವ ಮತ್ತು ಆತನ ಹೇಳಿಕ ಇರುವ ಪತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಪತ್ರದಲ್ಲಿ ‘ಜುಲೈ 29ರಂದು ಕಚೇರಿಗೆ ವಾಪಸ್ಸಾಗಿದ್ದೇನೆ. ಆದರೆ ಇನ್ನೂ ಅವರ ಐಡಿ (ಗುರುತಿನ ಚೀಟಿ) ಸಕ್ರಿಯವಾಗಿಲ್ಲ. ಅಲ್ಲದೆ ಜುಲೈ 31ರಂದು ಬರಬೇಕಾದ ಸಂಬಳ ಕೂಡ ಇದುವರೆಗೆ ಬಂದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಮುಂದುವರಿದು, ‘ಸಭೆಯ ವೇಳೆ ಎಚ್ಆರ್ ವಿಭಾಗಕ್ಕೆ ನನ್ನ ಬಳಿ ಹಣವಿಲ್ಲ, ಹೀಗಾಗಿ ಅನಿವಾರ್ಯವಾಗಿ ಪಾದಚಾರಿ ಮಾರ್ಗದಲ್ಲಿ ಮಲಗಿದ್ದೇನೆ ಎಂದು ಹೇಳಿದ್ದೇನೆ, ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಉದ್ಯೋಗಿಯ ಪೋಸ್ಟ್ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಟಿಸಿಎಸ್, ಪ್ರತಿಕ್ರಿಯೆ ನೀಡಿದ್ದು, ‘ಉದ್ಯೋಗಿಯು ಮಾಹಿತಿ ನೀಡದೆ ರಜೆ ತೆಗೆದುಕೊಂಡಿದ್ದರು. ಇದನ್ನು ‘ಅನಧಿಕೃತ ಗೈರು ಹಾಜರಾತಿ’ ಎಂದು ಪರಿಗಣಿಸಿಲಾಗಿದ್ದು, ಅದಕ್ಕೆ ತಕ್ಕ ಹಾಗೆ ಅವರ ಹಾಜರಾತಿ ಇಲ್ಲದ ದಿನಗಳ ಸಂಬಳ ಕಡಿತಗೊಂಡಿದೆ. ಉದ್ಯೋಗಿ ಕೆಲಸಕ್ಕೆ ವಾಪಸ್ಸಾದ ಬಳಿಕ ಅವರು ಮನವಿಯನ್ನು ಸ್ವೀಕರಿಸಿದ್ದು, ವಸತಿ ವ್ಯವಸ್ಥೆಯನ್ನು ನೀಡಲಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲಾಗುತ್ತಿದೆ’ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.