ವಾಷಿಂಗ್ಟನ್: ಸಾಲದ ಪುನರ್ರಚನೆ ಮತ್ತು ನಿರ್ಣಯದ ವಿಚಾರವು ಅನೇಕ ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳ ತುರ್ತು ಸಮಸ್ಯೆಯಾಗಿವೆ. ಈ ವಿಚಾರಗಳನ್ನು ವೇಗವಾಗಿ ಸರಿಪಡಿಸಬೇಕು ಎಂಬುದನ್ನು ಜಿ20 ರಾಷ್ಟ್ರಗಳು ಒಪ್ಪುತ್ತವೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸಾಲದ ಪುನರ್ರಚನೆ ಮತ್ತು ನಿರ್ಣಯದ ಕುರಿತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹಾಗೂ ವಿಶ್ವಬ್ಯಾಂಕ್ನ ವಾರ್ಷಿಕ ಸಭೆಯ ಹೊರತಾಗಿಯೂ, ಸಾಲದಲ್ಲಿರುವ ರಾಷ್ಟ್ರಗಳಿಗೆ ಪರಿಹಾರವು ಸೂಕ್ತ ಸಮಯದಲ್ಲಿ ಲಭಿಸಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಜಿ20 ರಾಷ್ಟ್ರಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚಿಸಲಾಯಿತು ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾ, ಜಾಂಬಿಯಾ, ಘಾನಾ ಮತ್ತು ಇಥಿಯೋಪಿಯಾದಂತಹ ಸಾಲದಿಂದ ತತ್ತರಿಸಿರುವ ಕೆಲವು ದೇಶಗಳ ಪ್ರತಿನಿಧಿಗಳು ಚರ್ಚೆಗೆ ಹಾಜರಿದ್ದರು.
ಜಾಗತಿಕ ಸಾಲದ ಕುರಿತಂತೆ ಬುಧವಾರ ನಡೆದ ಸಭೆಯು, ದೇಶಗಳು ಸಾಲದ ಸಂಕಟದಿಂದ ಹೊರಬರಲು ಮತ್ತು ಜಾಗತಿಕ ಸಾಲದ ಸನ್ನಿವೇಶದಲ್ಲಿ ಹೇಗೆ ಮುನ್ನಡೆಯಬೇಕು ಎಂಬುದರ ಕುರಿತು ಚರ್ಚಿಸಲು ನಿರ್ದಿಷ್ಟ ಮಾರ್ಗವನ್ನು ಸೂಚಿಸಿದೆ ಎಂದೂ ಸೀತಾರಾಮನ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.