ನವದೆಹಲಿ: ‘ಪ್ರಸ್ತುತ ಠೇವಣಿ ವಿಮಾ ಮಿತಿ ₹5 ಲಕ್ಷದವರೆಗೆ ಇದೆ. ಈ ಮಿತಿಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ’ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ.ನಾಗರಾಜು ಸೋಮವಾರ ಹೇಳಿದ್ದಾರೆ.
ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್ ಹಗರಣ ಬೆಳಕಿಗೆ ಬಂದ ಕೆಲವೇ ದಿನಗಳ ನಂತರ, ಈ ಹೇಳಿಕೆ ನೀಡಿದ್ದಾರೆ.
ವಿಮೆಯನ್ನು ಹೆಚ್ಚಿಸುವ ಪ್ರಸ್ತಾವವನ್ನು ಸರ್ಕಾರ ಪರಿಗಣಿಸುತ್ತಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿ ಬ್ಯಾಂಕ್ ಕೂಡ ಪ್ರತಿಯೊಬ್ಬ ಗ್ರಾಹಕನ ಠೇವಣಿ ಮೇಲೆ ವಿಮೆ (ಡೆಪಾಸಿಟ್ ಇನ್ಶುರೆನ್ಸ್) ಮಾಡಿಸಿರುತ್ತದೆ. ಆರ್ಬಿಐನ ಅಂಗ ಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ಗೆ (ಡಿಐಸಿಜಿಸಿ) ನಿರ್ದಿಷ್ಟ ಕಂತು ಪಾವತಿಸುವ ಮೂಲಕ ಬ್ಯಾಂಕ್ಗಳು ಗ್ರಾಹಕರ ಠೇವಣಿಗೆ ಭದ್ರತೆ ಒದಗಿಸಿರುತ್ತವೆ. ಅಂದರೆ ಬ್ಯಾಂಕ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಲ್ಲಿ ಅಥವಾ ದಿವಾಳಿಯಾದಲ್ಲಿ ಅಥವಾ ಠೇವಣಿದಾರರ ಹಣ ಮರಳಿಸಲು ವಿಫಲವಾದರೆ ಗ್ರಾಹಕರಿಗೆ ₹5 ಲಕ್ಷದ ವರೆಗಿನ ಠೇವಣಿ ಹಣವನ್ನು ಡಿಐಸಿಜಿಸಿ ಪಾವತಿಸುತ್ತದೆ. ₹1 ಲಕ್ಷವಿದ್ದ ವಿಮಾ ಮಿತಿಯ ಮೊತ್ತವನ್ನು 2020ರಲ್ಲಿ ₹5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.