ADVERTISEMENT

ಆರ್ಥಿಕತೆಗೆ ಇನ್ನಷ್ಟು ಉತ್ತೇಜನಾ ಕೊಡುಗೆ ನಿರೀಕ್ಷೆ: ಅಮಿತಾಭ್‌ ಕಾಂತ್‌

ಪಿಟಿಐ
Published 3 ಅಕ್ಟೋಬರ್ 2019, 12:02 IST
Last Updated 3 ಅಕ್ಟೋಬರ್ 2019, 12:02 IST
ಅಮಿತಾಭ್‌ ಕಾಂತ್‌
ಅಮಿತಾಭ್‌ ಕಾಂತ್‌   

ನವದೆಹಲಿ: ಆರ್ಥಿಕ ಬೆಳವಣಿಗೆ ದರವನ್ನು ಗರಿಷ್ಠ ಮಟ್ಟದಲ್ಲಿ ಕಾಯ್ದುಕೊಳ್ಳುವುದಕ್ಕೆ ಕೇಂದ್ರ ಸರ್ಕಾರವು ಇನ್ನೂ ಕೆಲವು ಉತ್ತೇಜನಾ ಕೊಡುಗೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.

‘ಮಂದಗತಿಯಲ್ಲಿ ಪ್ರಗತಿ ದಾಖಲಿಸುತ್ತಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಈಗಾಗಲೇ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸಿದೆ. ಈ ಹಣಕಾಸು ನೀತಿಗೆ ಕೆಲ ಮಿತಿಗಳಿವೆ. ಹೀಗಾಗಿ ಕೇಂದ್ರ ಸರ್ಕಾರವು ಹಲವಾರು ವಿತ್ತೀಯ ಕ್ರಮಗಳನ್ನೂ ಪ್ರಕಟಿಸಿತ್ತು. ಇಂತಹ ಇನ್ನೂ ಹಲವು ಉತ್ತೇಜನಾ ಕ್ರಮಗಳು ಮುಂಬರುವ ದಿನಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ’ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅಂದಾಜಿಸಿದ್ದಾರೆ.

ಇಲ್ಲಿ ನಡೆದ ಜಾಗತಿಕ ಆರ್ಥಿಕ ವೇದಿಕೆಯ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಕೇಂದ್ರೋದ್ಯಮಗಳ ಷೇರು ವಿಕ್ರಯಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡಲಿದೆ. ಹೂಡಿಕೆದಾರರು ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬದಲಿಗೆ ಹಳೆಯ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಅಗತ್ಯ ಹೆಚ್ಚಿದೆ. ಉದ್ದಿಮೆ – ವಹಿವಾಟಿನ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಷ್ಟೇ ಸರ್ಕಾರ ತನ್ನ ‍ಪಾತ್ರವನ್ನು ಸೀಮಿತಗೊಳಿಸಬೇಕು. ವಹಿವಾಟಿನಿಂದ ಸರ್ಕಾರ ದೂರವೇ ಉಳಿಯಬೇಕು’ ಎಂದೂ ಕಾಂತ್ ಅಭಿಪ್ರಾಯಪಟ್ಟರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.