ಮುಂಬೈ: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನು ಜಾರಿಗೂ ರಿಲಯನ್ಸ್ಗೂ ಯಾವ ಸಂಬಂಧವೂ ಇಲ್ಲ. ದುಷ್ಕರ್ಮಿಗಳು ನಡೆಸುತ್ತಿರುವ ಕಾನೂನುಬಾಹಿರ ವಿಧ್ವಂಸಕ ಕೃತ್ಯಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ತುರ್ತಾಗಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಅಂಗಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (RJIL) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ.
ಇಂಥ ಹಿಂಸಾತ್ಮಕ ಕೃತ್ಯಗಳಿಂದ ಕಂಪೆನಿಯ ಸಾವಿರಾರು ಉದ್ಯೋಗಿಗಳ ಜೀವ ಅಪಾಯದಲ್ಲಿದೆ. ಅಲ್ಲದೆ ಈ ಎರಡು ರಾಜ್ಯಗಳಲ್ಲಿ ಇರುವ ಮುಖ್ಯವಾದ ಸಂವಹನ ಮೂಲಸೌಕರ್ಯ, ಮಾರಾಟ ಮತ್ತು ಸರ್ವೀಸ್ ಔಟ್ಲೆಟ್ಗಳಿಗೆ ಹಾನಿ ಮತ್ತು ಸಮಸ್ಯೆಯಾಗಿದೆ ಎಂದು ಉಲ್ಲೇಖಿಸಿದೆ.
ಕೆಲವು ಹಿತಾಸಕ್ತಿಗಳು ಹಾಗೂ ಉದ್ಯಮದಲ್ಲಿನ ಪ್ರತಿಸ್ಪರ್ಧಿಗಳು ಹಿಂಸಾಕೃತ್ಯ ಎಸಗಲು ದುಷ್ಕರ್ಮಿಗಳನ್ನು ಪ್ರಚೋದಿಸುತ್ತಿದ್ದಾರೆ. ದೆಹಲಿ ಸಮೀಪ ನಡೆಯುತ್ತಿರುವ ರೈತರ ಪ್ರತಿಭಟನೆಯ ಲಾಭವನ್ನು ಪಡೆದುಕೊಂಡು, ಈ ಪಟ್ಟಭದ್ರ ಹಿತಾಸಕ್ತಿಗಳು ನಿರಂತರವಾಗಿ ದುರುದ್ದೇಶಪೂರಿತ ಹಾಗೂ ರಿಲಯನ್ಸ್ ಕಂಪೆನಿಯ ಹೆಸರು ಹಾಳು ಮಾಡುವ ಕೃತ್ಯದಲ್ಲಿ ತೊಡಗಿವೆ. ಇವುಗಳಲ್ಲಿ ಯಾವುದೂ ಸತ್ಯ ಇಲ್ಲ ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನು ಜಾರಿಗೂ ರಿಲಯನ್ಸ್ಗೂ ಯಾವ ಸಂಬಂಧವೂ ಇಲ್ಲ. ಈಗ ಕೃಷಿ ಕಾನೂನಿನ ಜತೆಗೆ ರಿಲಯನ್ಸ್ ಹೆಸರು ತಳುಕು ಹಾಕುತ್ತಿರುವುದು ಕೇವಲ ಕಂಪೆನಿಯ ವ್ಯವಹಾರ ಮತ್ತು ವರ್ಚಸ್ಸು ಹಾಳು ಮಾಡುವುದಕ್ಕೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.