ADVERTISEMENT

Mysuru Dasara: ‘ನಾಡಹಬ್ಬ’ಕ್ಕೆ ಬಾನು ಮುಷ್ತಾಕ್‌ ಚಾಲನೆ ಇಂದು, ಸಕಲ ಸಿದ್ಧತೆ

ಚಾಮುಂಡೇಶ್ವರಿಗೆ ಅಗ್ರಪೂಜೆಯೊಂದಿಗೆ ಉದ್ಘಾಟನೆ

ಎಂ.ಮಹೇಶ್
Published 22 ಸೆಪ್ಟೆಂಬರ್ 2025, 0:30 IST
Last Updated 22 ಸೆಪ್ಟೆಂಬರ್ 2025, 0:30 IST
ಬಾನು ಮುಷ್ತಾಕ್
ಬಾನು ಮುಷ್ತಾಕ್   

ಮೈಸೂರು: ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಅರಂಭವಾಗಿದೆ.

ಅಂತರರಾಷ್ಟ್ರೀಯ ‘ಬುಕರ್‌’ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್‌ ಇಲ್ಲಿ ಸೋಮವಾರದಿಂದ (ಸೆ.22) ಅ.2ರವರೆಗೆ ನಡೆಯುವ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 10.10ರಿಂದ 10.40ರೊಳಗೆ ನಾಡದೇವತೆ ಚಾಮುಂಡೇಶ್ವರಿ ದೇವಿಯ ‘ಅಗ್ರಪೂಜೆ’ಯೊಂದಿಗೆ ಉತ್ಸವ ಗರಿಗೆದರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉ‍ಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಜನ‍ಪ್ರತಿನಿಧಿಗಳು ಪಾಲ್ಗೊಳ್ಳುವರು. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅಧ್ಯಕ್ಷತೆ ವಹಿಸುವರು.

ಇದೇ ಮೊದಲು:

ADVERTISEMENT

ಮೈಸೂರು ದಸರಾ ಉದ್ಘಾಟನೆಗೆ ಮುಸ್ಲಿಂ ಮಹಿಳೆಯನ್ನು ಆಯ್ಕೆ ಮಾಡಿರುವುದು ಇದೇ ಮೊದಲು. ಇದನ್ನು ಬಿಜೆಪಿ, ಹಿಂದುತ್ವ ಪರ ಸಂಘಟನೆಗಳು ವಿರೋಧಿಸಿದ್ದರಿಂದ ವಿವಾದ ಉಂಟಾಗಿತ್ತು. ಮಾಜಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಕೆಲವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಸಲ್ಲಿಸಿದ್ದರು. ಈ ಅರ್ಜಿಗಳನ್ನು ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ಬಾನು ಆಯ್ಕೆ ವಿರೋಧಿಸಿದವರಿಗೆ ಛೀಮಾರಿ ಹಾಕಿವೆ. ಆದರೆ, ‘ವಿವಾದದ ಕಾರ್ಮೋಡ’ದ ಕಾರಣದಿಂದಾಗಿ, ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನೆ ಕಾರ್ಯಕ್ರಮಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಪೊಲೀಸರನ್ನು ನಿಯೋಜಿಸ
ಲಾಗಿದೆ. ಪಾಸ್ ಇದ್ದವರಿಗಷ್ಟೆ ಪ್ರವೇಶವಿದೆ.

11 ಕಾರ್ಯಕ್ರಮಗಳಿಗೆ ಚಾಲನೆ:
ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆ ಗೊಂಡ ನಂತರ, ನಗರದ ವಿವಿಧ ವೇದಿಕೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ.

ರಾಜವಂಶಸ್ಥರಿಂದ ‘ಖಾಸಗಿ ದರ್ಬಾರ್‌’

ಮೈಸೂರು ರಾಜವಂಶಸ್ಥರು ಅರಮನೆಯಲ್ಲಿ ಸೋಮವಾರದಿಂದಲೇ ಶರನ್ನವರಾತ್ರಿ ಆಚರಿಸಲಿದ್ದಾರೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ರತ್ನಖಚಿತ ಸಿಂಹಾಸನದಲ್ಲಿ ಕುಳಿತು 11ನೇ ವರ್ಷದ ‘ಖಾಸಗಿ ದರ್ಬಾರ್‌’ ನಡೆಸಲಿದ್ದಾರೆ. ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಗತಕಾಲದ ವೈಭವ ಸಾರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶವಿಲ್ಲ.

ಗಾಂಧಿ ಜಯಂತಿಯಂದೇ ಜಂಬೂಸವಾರಿ

ದಸರಾ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆಯು ಗಾಂಧಿ ಜಯಂತಿ (ಅ.2)ಯಂದು ನಡೆಯಲಿದ್ದು, ಅಂದು ಮಧ್ಯಾಹ್ನ 1ರಿಂದ 1.18ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ನಂದಿಧ್ವಜ ಪೂಜೆ ನೆರವೇರಲಿದೆ. ಸಂಜೆ 4.42ರಿಂದ 5.06ರವರೆಗೆ ಅರಮನೆಯ ಒಳಾವರಣದಲ್ಲಿ ಮೆರವಣಿಗೆ ಗರಿಬಿಚ್ಚಲಿದ್ದು, ರಾಜಮಾರ್ಗದಲ್ಲಿ ನಾಡಿನ ಹಿರಿಮೆ–ಗರಿಮೆ ಬಿಂಬಿತವಾಗಲಿದೆ.

ಗಜಪಡೆಯ ನಾಯಕ ‘ಅಭಿಮನ್ಯು’ ಆನೆ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಅಲಂಕೃತ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಲಿದ್ದಾರೆ. ಮೆರವಣಿಗೆಯು ಬನ್ನಿಮಂಟಪ ತಲುಪಿದ ನಂತರ, ಅಲ್ಲಿನ ಮೈದಾನದಲ್ಲಿ ಸಂಜೆ 7ಕ್ಕೆ ಪಂಜಿನ ಕವಾಯತು ಪ್ರದರ್ಶನ ನಡೆಯಲಿದೆ. ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ಕವಾಯತು ವೀಕ್ಷಿಸಿ ಗೌರವವಂದನೆ ಸ್ವೀಕರಿಸಲಿದ್ದಾರೆ. ಈ ಪ್ರದರ್ಶನದೊಂದಿಗೆ 11 ದಿನಗಳ ಮಹೋತ್ಸವ ಸಂಪನ್ನಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.