
ಸಂಕ್ರಾಂತಿ ಹಿನ್ನಲೆಯಲ್ಲಿ ಧಾನ್ಯದ ರಾಶಿಗೆ ಪೂಜೆ ಮಾಡಿರುವುದು.
ಚಿತ್ರ: ಪ್ರಜಾವಾಣಿ
2026ರ ಹೊಸವರ್ಷ ಆರಂಭವಾಗಿದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಯುಗಾದಿಯ ಚೈತ್ರ ಮಾಸದ ಆರಂಭದೊಂದಿಗೆ ಹೊಸವರ್ಷ ಪ್ರಾರಂಭವಾಗುತ್ತದೆ. 2026ರಲ್ಲಿ ಬರುವ ಮೊದಲ ಹಿಂದೂ ಹಬ್ಬವಾದ ಸಂಕ್ರಾಂತಿಯನ್ನು ಸುಗ್ಗಿಯ ಹಬ್ಬವೆಂದೂ ಕರೆಯುತ್ತಾರೆ. ಹಾಗಾದರೆ ಸಂಕ್ರಾತಿಯ ಹಬ್ಬದ ಸಂಪ್ರದಾಯ ಹಾಗೂ ಮಹತ್ವವೇನು ಎಂಬುದನ್ನು ತಿಳಿಯೋಣ.
ಆಚರಣೆ ಹಿನ್ನೆಲೆ
ಮಕರ ಸಂಕ್ರಾತಿ ಕೇವಲ ಹಬ್ಬವಲ್ಲ, ಇದು ಪ್ರಕೃತಿಯ ಹಬ್ಬವಾಗಿದೆ. ಈ ಹಬ್ಬದಂದು ಪ್ರಕೃತಿಯಲ್ಲಿ ಬದಲಾವಣೆಯಾಗಲಿದೆ. ಅದರಲ್ಲಿಯೂ ಸೂರ್ಯನು ಉತ್ತರ ದಿಕ್ಕಿಗೆ ಚಲಿಸುತ್ತಿದ್ದಂತೆ ಸಂಕ್ರಾತಿ ಆರಂಭವಾಗುತ್ತದೆ. ಜನವರಿ 14ರಂದು ಸಂಕ್ರಾತಿಯನ್ನು ದೇಶದಾದ್ಯಂತ ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ದಿನವನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಮಣ ಕಾಲವೆಂದೂ ಕರೆಯುತ್ತಾರೆ.
ಜ್ಯೋತಿಷ್ಯ ಶಾಸ್ತ್ರದ ಹೇಳುವಂತೆ, ಈ ದಿನ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಇದು ಸುಗ್ಗಿಯ ಕಾಲವಾಗಿರುವುದರಿಂದ ರೈತರು ಬೆಳದ ಬೆಳೆಯನ್ನು ಕಟಾವು ಮಾಡಿ ಮನೆಯಲ್ಲಿ ತುಂಬಿರುತ್ತಾರೆ. ಈ ದಿನ ವಿಶೇಷವಾಗಿ ಎಳ್ಳು ಬೆಲ್ಲವನ್ನು ತಯಾರು ಮಾಡಿ ಇತರರಿಗೂ ಹಂಚಿ ಸೇವಿಸಲಾಗುತ್ತದೆ.
ಹೀಗೆ ಆಚರಿಸಿ
ಈ ದಿನ ಬೆಳಿಗ್ಗೆ ಬೇಗ ಎದ್ದು ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಬಾಗಿಲಿಗೆ ತೋರಣವನ್ನು ಕಟ್ಟಬೇಕು. ಬಳಿಕ ಮನೆಯ ಮುಂದೆ ರಂಗೋಲಿ ಬಿಡಬೇಕು. ದೇವರ ಮನೆಯನ್ನು ಸ್ವಚ್ಛಗೊಳಿಸಿ ಸಿರಿಧಾನ್ಯಗಳನ್ನಿಟ್ಟು ದೇವರಿಗೆ ಪೂಜೆ ಸಲ್ಲಿಸಿದರೆ ಶುಭವಾಗಲಿದೆ ಎಂಬ ನಂಬಿಕೆ ಇದೆ.
ಮನೆಯಲ್ಲಿರುವ ದನ ಕರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಬೇಕು. ಅವುಗಳಿಗೆ ಮೈ ತೊಳೆದು, ಕೊಂಬಿಗೆ ಎಣ್ಣೆ ಸವರಿ, ಅರಿಸಿಣ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಲಭಿಸುತ್ತದೆ. ಅಲ್ಲದೇ ದನಕರುಗಳಿಗೆ ಈ ದಿನ ಕಿಚ್ಚು ಹಾಯಿಸುವ ಪದ್ದತಿಯೂ ಹಲವೆಡೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಂಕ್ರಾಂತಿ ಆರಂಭದ ಸಮಯ
ಜನವರಿ 14ರಂದು ಸೂರ್ಯನು ಧನುರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ.
ಈ ದಿನ ಮಧ್ಯಾಹ್ನ 3:31 ರಿಂದ, ಸಂಜೆ 5:45 ನಡುವೆ ಸೂರ್ಯ ಚಲಿಸಲಿದ್ದಾನೆ. ಈ ಅವಧಿ ಸುಮಾರು 2 ಗಂಟೆ 32 ನಿಮಿಷಗಳಾಗಿದೆ. ಈ ಅವಧಿಯಲ್ಲಿ ಯವುದೇ ಶುಭ ಕೆಲಸವನ್ನು ಆರಂಭ ಮಾಡಬಹುದು. ಸೂರ್ಯನಿಗೆ ನೈವೇದ್ಯ ಅರ್ಪಿಸಿ, ನಿಮ್ಮ ಇಷ್ಟ ದೇವರಿಗೆ ಪೂಜೆ ಸಲ್ಲಿಸುವುದು ಶುಭಕರ ಎಂದು ಜ್ಯೋತಿಷ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.