ADVERTISEMENT

ಬೆಂಗಳೂರು: ಮತದಾನ ಮಾಡಿದ ಗುರುತು ತೋರಿಸಿದವರಿಗೆ ಉಚಿತ ತಿಂಡಿ– ಸಾಲುಗಟ್ಟಿದ ಜನ

ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿಯ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ನಲ್ಲಿ ಉಚಿತ ತಿಂಡಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 10:31 IST
Last Updated 26 ಏಪ್ರಿಲ್ 2024, 10:31 IST
   

ಬೆಂಗಳೂರು: ಮತದಾನ ಮಾಡಿದವರಿಗೆ ಉಚಿತ ಉಪಾಹಾರ ಘೋಷಣೆ ಮಾಡಿದ್ದ ‘ನಿಸರ್ಗ ಗ್ರ್ಯಾಂಡ್‌’ ಹೋಟೆಲ್‌ಗೆ ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು. ಸಾಲುಗಟ್ಟಿ ನಿಂತು ಉಪಾಹಾರ ಸವಿದರು.

ನಗರದ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ ಇರುವ ಈ ಹೋಟೆಲ್‌ನಲ್ಲಿ ಮತದಾರರಿಗೆ ಬೆಣ್ಣೆ ಖಾಲಿ ದೋಸೆ, ತುಪ್ಪದ ಲಾಡು ಮತ್ತು ತಂಪು ಪಾನಕ ಉಚಿತವಾಗಿ ವಿತರಿಸಲಾಯಿತು. 


‘ಇದೊಂದು ಅಪ್ಪಟ ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಕಾರ್ಯಕ್ರಮವಾಗಿದೆ. ಮತ ಚಲಾಯಿಸಿದ ಗುರುತು ತೋರಿಸಿದವರಿಗೆಲ್ಲ ಈ ಕೊಡುಗೆ ನೀಡಲಾಗಿದೆ. ಮತದಾನದ ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೋಟೆಲ್‌ ಮಾಲೀಕ ಎಸ್.ಪಿ. ಕೃಷ್ಣರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT


‘ಬೆಳಿಗ್ಗಿನಿಂದ ಸಂಜೆಯವರೆಗೆ 6,800 ಜನ ಭೇಟಿ ನೀಡಿ ಉಚಿತ ತಿಂಡಿ ಸವಿದಿದ್ದಾರೆ. ತಂಪು ಪಾನಕಕ್ಕೆ 850 ಕೆ.ಜಿ ಕಲ್ಲಂಗಡಿ ಹಣ್ಣಿನ ಬಳಕೆಯಾಗಿದೆ’ ಎಂದು ಅವರು ಮಾಹಿತಿ ನೀಡಿದರು.


ಲುಲು ಮತ್ತು ಓರಿಯಾನ್‌ ಮಾಲ್‌ನಲ್ಲಿರುವ ಕಾಮತ್‌ ಹೊಸರುಚಿ ಹೋಟೆಲ್‌, ಅಯ್ಯಂಗಾರ್ ಓವನ್‌ ಫ್ರೆಶ್‌ನಂತಹ ಬೇಕರಿಗಳಲ್ಲಿ ಮತದಾನ ಮಾಡಿದ ಗುರುತು ತೋರಿಸಿದವರಿಗೆ ಶೇ 10ರಷ್ಟು ರಿಯಾಯಿತಿಯನ್ನು ನೀಡಿವೆ.


ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್‌, ‘ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ನಗರದ ಕೆಲವು ಹೋಟೆಲ್‌ಗಳ ಮಾಲೀಕರು ಉಚಿತ ಮತ್ತು ರಿಯಾಯಿತಿ ದರಗಳನ್ನು ಘೋಷಿಸಿದ್ದರು. ಅದರಂತೆ ಉಪಾಹಾರ ವಿತರಿಸಲಾಗಿದೆ. ಕೆಲ ಬೇಕರಿಗಳಲ್ಲಿ ರಿಯಾಯಿತಿ ದರದಲ್ಲಿ ಉತ್ಪನ್ನಗಳು ಮಾರಾಟ ಮಾಡಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.