ADVERTISEMENT

ಬೆಂಗಳೂರು | ಹೂಡಿಕೆ ಹೆಸರಿನಲ್ಲಿ ವಂಚನೆ: ₹16 ಲಕ್ಷ ಕಳೆದುಕೊಂಡ ಟೆಕಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:39 IST
Last Updated 23 ಆಗಸ್ಟ್ 2025, 14:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಟೆಕಿಯೊಬ್ಬರಿಗೆ ₹16 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ವೈಟ್‌ಫೀಲ್ಡ್ ಸೈಬರ್‌ ಅಪರಾಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮಹದೇವಪುರದ ನಿವಾಸಿ, ಟೆಕಿ ಎಸ್.ಸಂತೋಷ್ ಅವರು ನೀಡಿದ ದೂರು ಆಧರಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66(ಡಿ) ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 318(4) ಹಾಗೂ 319(2)ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸೈಬರ್‌ ಠಾಣೆಯ ಪೊಲೀಸರು ಹೇಳಿದರು.

ದೂರುದಾರರ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಹೂಡಿಕೆ ಸಂಬಂಧ ಸಂದೇಶವೊಂದು ಬಂದಿತ್ತು. ಅದಾದ ಮೇಲೆ ಅಮೀರ್ ಸಿಂಗ್, ರಾಯನ್‌ ಹಾಗೂ ಲತಿಕಾ ಎಂಬುವವರು ಕರೆ ಮಾಡಿ ಪರಿಚಯಿಸಿಕೊಂಡಿದ್ದರು. ‘ವ್ಯಾಲಿಯಂಟ್ ಆ್ಯಪ್‌’ ಡೌನ್‌ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ ಎಂಬುದಾಗಿ ನಂಬಿಸಿದ್ದರು.

ADVERTISEMENT

ಅವರ ಮಾತು ನಂಬಿದ್ದ ಸಂತೋಷ್ ಆರಂಭದಲ್ಲಿ ₹ 75 ಸಾವಿರ ಹೂಡಿಕೆ ಮಾಡಿದ್ದರು. ಈ ಹಣಕ್ಕೆ ವಂಚಕರು ಲಾಭಾಂಶ ನೀಡಿದ್ದರು. ಅದಾದ ಮೇಲೆ ಮೂರು ಖಾತೆಗಳಿಂದ ₹24.85 ಲಕ್ಷ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ₹ 8.82 ಲಕ್ಷ ಲಾಭಾಂಶವನ್ನು ನೀಡಿದ್ದರು. ಅದಾದ ಮೇಲೆ ₹16 ಲಕ್ಷ ವಾಪಸ್‌ ನೀಡಿಲ್ಲ. ಲಾಭದ ಹಣವನ್ನೂ ನೀಡಿಲ್ಲ ಎಂಬುದಾಗಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.