ADVERTISEMENT

ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣ: ಸಿ.ಎಯಿಂದ ಮಾಹಿತಿ ಪಡೆದ ಎಸ್‌ಐಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:05 IST
Last Updated 3 ಫೆಬ್ರುವರಿ 2026, 16:05 IST
ರಾಯ್‌ 
ರಾಯ್‌    

ಬೆಂಗಳೂರು: ರಿಯಲ್‌ ಎಸ್ಟೇಟ್ ಕಂಪನಿಯಾದ ‘ಕಾನ್ಫಿಡೆಂಟ್‌ ಗ್ರೂಪ್‌’ನ ಮುಖ್ಯಸ್ಥ ಸಿ.ಜೆ.ರಾಯ್‌ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕರಿಂದ (ಸಿ.ಎ) ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ.

‘ಕಂಪನಿಯ ವಾರ್ಷಿಕ ವಹಿವಾಟು, ಸಾಲ, ವಿದೇಶದಲ್ಲಿ ಹೂಡಿಕೆ ಸಂಬಂಧ ಲೆಕ್ಕ ಪರಿಶೋಧಕರಿಂದ ಪ್ರಾಥಮಿಕ ಮಾಹಿತಿ ಪಡೆಯಲಾಗಿದೆ‌. ಕರ್ನಾಟಕ, ಕೇರಳ ಹಾಗೂ ದುಬೈನಲ್ಲಿ ‘ಕಾನ್ಫಿಡೆಂಟ್‌ ಗ್ರೂಪ್‌’ ವಿವಿಧ ಯೋಜನೆಗಳಿಗೆ ಹೂಡಿಕೆ ಮಾಡಿರುವ ಮಾಹಿತಿ ಸಿಕ್ಕಿದೆ. ಪೂರ್ಣ ಪ್ರಮಾಣದ ವಿವರ ನೀಡಲು ಮತ್ತಷ್ಟು ಸಮಯ ಬೇಕಾಗಿದೆ ಎಂದು ಕಂಪನಿ ತಿಳಿಸಿದೆ. ರಾಯ್ ಅವರು ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿದ್ದರೇ? ಐ.ಟಿ ಅಧಿಕಾರಿಗಳ ಒತ್ತಡವಿತ್ತೇ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಳಿಸಲಾಗಿದೆ’ ಎಂದು ಎಸ್‌ಐಟಿ ತಿಳಿಸಿದೆ.

‘ಜಪ್ತಿ ಮಾಡಿರುವ ಡೈರಿ ಹಾಗೂ ಆ್ಯಂಡ್ರಾಯ್ಡ್, ಐ–ಫೋನ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿದೆ. ಪಾಸ್‌ವರ್ಡ್ ಹಾಕಿದ್ದರಿಂದ ಐ–ಫೋನ್‌ ತೆರೆಯಲು ಸಾಧ್ಯವಾಗಿಲ್ಲ. ಆ್ಯಂಡ್ರಾಯ್ಡ್ ಫೋನ್‌ನಲ್ಲಿ ರಾಯ್ ಅವರು ಯಾರೊಂದಿಗೂ ಹೆಚ್ಚು ಮಾತನಾಡಿಲ್ಲ. ರಿಯಲ್‌ ಎಸ್ಟೇಟ್‌ಗೆ ಸಂಬಂಧಿಸಿದ ವ್ಯವಹಾರಗಳ ಬಗ್ಗೆ ರಾಯ್‌ ಅವರು ಮುಖಾಮುಖಿಯಾಗಿ ಚರ್ಚಿಸುತ್ತಿದ್ದರು ಎಂಬುದು ಗೊತ್ತಾಗಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ADVERTISEMENT

ರಾಯ್‌ ಅವರು ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ‘ಕಾನ್ಫಿಡೆಂಟ್ ಗ್ರೂಪ್‌’ನ ಕಚೇರಿಯಲ್ಲಿ ಜ.30ರಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.