ವಂಚನೆ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಚಿನ್ನದಂಗಡಿ ಮಾಲಕಿಯಿಂದ ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದ ಮತ್ತೊಬ್ಬ ಆರೋಪಿ ಕನ್ನಡದ ನಟ ಧರ್ಮೇಂದ್ರ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ.
ಮೊದಲ ಆರೋಪಿ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್ ಅವರನ್ನು ಶನಿವಾರ ಚಂದ್ರಾಲೇಔಟ್ ಪೊಲೀಸರು ಬಂಧಿಸಿದರು. ಇದರ ಬೆನ್ನಲ್ಲೇ ಧರ್ಮೇಂದ್ರ ಅವರು ತಮ್ಮ ಮೊಬೈಲ್ ಫೋನ್ ಸ್ವಿಚ್ಡ್ಆಫ್ ಮಾಡಿಕೊಂಡಿದ್ದಾರೆ.
ಪೊಲೀಸರು ಆರೋಪಿಗೆ ನೋಟಿಸ್ ನೀಡಲು ಮನೆಗೆ ಹೋದಾಗ ಅಲ್ಲಿರಲಿಲ್ಲ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅನ್ನು ಅವರ ಮನೆ ಗೋಡೆಗೆ ಅಂಟಿಸಿದ್ದರು. ಆದರೆ ಅವರು ವಿಚಾರಣೆಗೆ ಗೈರು ಹಾಜರಾಗಿದ್ದು, ಪೊಲೀಸರು ಅವರ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.
ವಂಚನೆ ಆರೋಪ: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರಿಶ್ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ.
ನಿವೇಶನಗಳನ್ನು ಮಾರಾಟ ಮಾಡಿಸುವುದಾಗಿ ಹೇಳಿ ₹5 ಕೋಟಿ ವಂಚನೆ ಮಾಡಿದ್ದಾರೆ ಎಂದು ಚಿನ್ನದ ವ್ಯಾಪಾರಿ ಸೋನು ಲಮಾಣಿ ಅವರು ಐಶ್ವರ್ಯಾ ಗೌಡ ದಂಪತಿ ವಿರುದ್ಧ ಆರೋಪಿಸಿದ್ದು, ಈ ಸಂಬಂಧ ದಾಖಲೆಗಳ ಸಮೇತ ಜೆ.ಪಿ.ನಗರ ಠಾಣೆಗೆ ದೂರು ನೀಡುವುದಾಗಿ ವಿಡಿಯೊದಲ್ಲಿ ಹೇಳಿಕೆ ನೀಡಿದ್ದಾರೆ.
ಈ ನಡುವೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಧ್ವನಿಯಲ್ಲಿ ಆರ್.ಆರ್. ನಗರದ ರಾಜಕಾರಣಿಯೊಬ್ಬರ ಪುತ್ರ ಶ್ರೇಯಸ್ ಅವರೊಂದಿಗೆ ನಟ ಧರ್ಮೇಂದ್ರ ಅವರು ರಸ್ತೆ ಕಾಮಗಾರಿಗೆ ಗುತ್ತಿಗೆ ನೀಡಲು ಹಣಕ್ಕೆ ಬೇಡಿಕೆ ಇರಿಸಿರುವ ಕುರಿತು ನಡೆಸಿರುವ ಸಂಭಾಷಣೆ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.