ADVERTISEMENT

ವಚನ ಸಾಹಿತ್ಯದ ಮುಂದುವರಿಕೆಯೇ ಬಂಡಾಯ ಸಾಹಿತ್ಯ: ಎಲ್.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 20:31 IST
Last Updated 11 ಮಾರ್ಚ್ 2023, 20:31 IST
ಕವಿಗೋಷ್ಠಿಯಲ್ಲಿ ಸುಕನ್ಯಾ ಮಾರುತಿ, ಎಲ್.ಹನುಮಂತಯ್ಯ, ಆರ್.ಜಿ.ಹಳ್ಳಿ ನಾಗರಾಜ್, ರಾಜಪ್ಪ ದಳವಾಯಿ, ಭಕ್ತರಹಳ್ಳಿ ಕಾಮರಾಜ್ ಇದ್ದರು –ಪ್ರಜಾವಾಣಿ ಚಿತ್ರ
ಕವಿಗೋಷ್ಠಿಯಲ್ಲಿ ಸುಕನ್ಯಾ ಮಾರುತಿ, ಎಲ್.ಹನುಮಂತಯ್ಯ, ಆರ್.ಜಿ.ಹಳ್ಳಿ ನಾಗರಾಜ್, ರಾಜಪ್ಪ ದಳವಾಯಿ, ಭಕ್ತರಹಳ್ಳಿ ಕಾಮರಾಜ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಬಂಡಾಯ ಸಾಹಿತ್ಯವು ವಚನ ಸಾಹಿತ್ಯದ ಮುಂದುವರಿದ ಭಾಗ ಎಂದು ರಾಜ್ಯಸಭೆ ಸದಸ್ಯ ಎಲ್.ಹನುಮಂತಯ್ಯ ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದವರಲ್ಲಿ ಬಹುತೇಕರು ಕೆಳ ಜಾತಿಯವರೇ ಆಗಿದ್ದರು. ಬಂಡಾಯ ಸಾಹಿತಿಗಳೂ ಇದೇ ಸಮುದಾಯಗಳಿಂದ ಬಂದವರು. ಅಲ್ಲದೇ ವಚನ ಸಾಹಿತ್ಯದ ಹಾದಿಯನ್ನು ಮುಂದುವರಿಸಿದ ಏಕೈಕ ಸಾಹಿತ್ಯ ಎಂದರೆ ಬಂಡಾಯ ಸಾಹಿತ್ಯ’ ಎಂದು ಪ್ರತಿಪಾದಿಸಿದರು.

‘ಖಡ್ಗವಾಗಲಿ ಕಾವ್ಯ ಎಂಬ ಮಾತನ್ನು ಈಗ ಹೇಳಿದರೆ ಜೈಲಿಗೆ ಹಾಕುವ ಸಾಧ್ಯತೆ ಇದೆ. ನಕ್ಸಲ್ ಹಣೆಪಟ್ಟಿ ಕಟ್ಟಿ ದೇಶದ್ರೋಹದ ಪ್ರಕರಣ ದಾಖಲಿಸಲಾಗುತ್ತದೆ. ಈ ರೀತಿಯ ಭಯದ ವಾತಾವರಣವನ್ನ ಸೃಷ್ಟಿಸಲಾಗಿದೆ. ಪ್ರಜೆಗಳ ಮೇಲೆ ಭಯ ಹೇರುವುದು ಪ್ರಜಾಸತ್ತತೆ ಆಗಲಾರದು’ ಎಂದರು.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್ತು ದಲಿತರ ನೋವುಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಬಂಡಾಯ ಸಾಹಿತ್ಯ ಸಂಘಟನೆ ಹುಟ್ಟು ಹಾಕಿದ್ದೆವು. ನಂತರದ ದಿನಗಳಲ್ಲಿ ಪರಿಷತ್ತು ಅವುಗಳನ್ನು ಅರ್ಥ ಮಾಡಿಕೊಂಡು ಪೂರಕವಾಗಿ ನಡೆದುಕೊಳ್ಳುವುದನ್ನು ರೂಢಿಸಿಕೊಂಡಿತ್ತು. ಈಗ ಸಾಹಿತ್ಯ ಪರಿಷತ್ತು ಮತ್ತೆ ಹಿಂದಕ್ಕೆ ಹೋಗಿದೆ. ಬಂಡಾಯದ ಧ್ವನಿಗಳನ್ನು ಅಡಗಿಸುವ ಪ್ರಯತ್ನ ಮಾಡುತ್ತಿದೆ. ಪ್ರಶಸ್ತಿ ವಾಪಸ್ ಪಡೆದು ಸದಸ್ಯತ್ವವನ್ನೇ ರದ್ದುಗೊಳಿಸುವ ಮಟ್ಟಕ್ಕೆ ಹೋಗಿದೆ. ಈ ಸಂದರ್ಭದಲ್ಲಿ ಬಂಡಾಯ ಸಾಹಿತ್ಯದ ಧ್ವನಿ ಗಟ್ಟಿಯಾಗಬೇಕಿದೆ’ ಎಂದು ಹೇಳಿದರು.

ಸಾಹಿತಿ ಆರ್‌.ಜಿ.ಹಳ್ಳಿ ನಾಗರಾಜ್ ಅವರು ಬಂಡಾಯ ಸಾಹಿತ್ಯದ ಚಾರಿತ್ರಿಕ ಹೆಜ್ಜೆಗಳನ್ನು ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.