ADVERTISEMENT

ಕ್ವಾರಂಟೈನ್‌ ಕೇಂದ್ರದಲ್ಲಿ ಮಹಿಳೆ ಅನಾರೋಗ್ಯ: ಆಸ್ಪತ್ರೆಗೆ ಸೇರಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 9 ಜೂನ್ 2020, 12:39 IST
Last Updated 9 ಜೂನ್ 2020, 12:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್‌ನಲ್ಲಿರುವ ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿದುಕೊಂಡಿದ್ದ ಮಹಿಳೆಯೊಬ್ಬರಿಗೆ ಸೋಮವಾರ ರಾತ್ರಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು, ಪ್ರಾಥಮಿಕ ಚಿಕಿತ್ಸೆ ಸಿಗದೇ ನರಳುತ್ತಿದ್ದ ಅವರನ್ನು ಪೊಲೀಸರೇ ಆಸ್ಪತ್ರೆಗೆ ಸೇರಿಸಿದ್ದಾರೆ.

ಹೊರ ರಾಜ್ಯದಿಂದ ಮರಳಿದ್ದ ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ರಾತ್ರಿ 9ರ ಸುಮಾರಿಗೆ ಏಕಾಏಕಿ ಮೂರ್ಛೆ ಬಿದ್ದು ಒದ್ದಾಡುತ್ತಿದ್ದರು. ಕೊರೊನಾ ಭೀತಿ ಇದ್ದಿದ್ದರಿಂದ ಯಾರೊಬ್ಬರೂ ಹತ್ತಿರ ಹೋಗಿರಲಿಲ್ಲ. ಕ್ವಾರಂಟೈನ್ ಕೇಂದ್ರ ಸಿಬ್ಬಂದಿ ಸಹ ಮಹಿಳೆ ರಕ್ಷಣೆಗೆ ಮುಂದಾಗಿರಲಿಲ್ಲ.

ಕೇಂದ್ರದಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ ಜನರೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಹೊಯ್ಸಳ ವಾಹನದಲ್ಲಿ ಕೇಂದ್ರಕ್ಕೆ ಬಂದಿದ್ದ ಪೊಲೀಸರೇ, ಆಂಬುಲೆನ್ಸ್ ವ್ಯವಸ್ಥೆ ಮಾಡಿಸಿ ಮಹಿಳೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ADVERTISEMENT

ಘಟನೆಯಿಂದ ಆಕ್ರೋಶಗೊಂಡ ಕೇಂದ್ರದ ವಾಸಿಗಳು, ಕೊಠಡಿಯಿಂದ ಹೊರಗೆ ಬಂದು ಘೋಷಣೆ ಕೂಗಿದರು. ‘ಕೇಂದ್ರದಲ್ಲಿ ವ್ಯವಸ್ಥೆಗಳು‌ ಸರಿ ಇಲ್ಲ. ಅನಾರೋಗ್ಯಕ್ಕೆ ತುತ್ತಾದರೂ ಕೇಳುವವರಿಲ್ಲ’ ಎಂದು ಆರೋಪಿಸಿದರು.

‘ಕೊಠಡಿಯಲ್ಲೇ ಮಹಿಳೆ ನರಳಾಡಿದರೂ ಕೇಂದ್ರದ ಸಿಬ್ಬಂದಿ ಸಹಾಯಕ್ಕೆ ಬರಲಿಲ್ಲ. ಆಸ್ಪತ್ರೆಗೆ ಕಳುಹಿಸಲೂ ಮುಂದಾಗದೇ ನಿರ್ಲಕ್ಷ್ಯ ವಹಿಸಿದರು’ ಎಂದು ದೂರಿದರು. ಪೊಲೀಸರೇ ಅವರನ್ನು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.