ADVERTISEMENT

ರಾಜರಾಜೇಶ್ವರಿ ನಗರ: ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಕಸ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 16:19 IST
Last Updated 22 ಡಿಸೆಂಬರ್ 2025, 16:19 IST
ಮುತ್ತರಾಯನಗರ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ
ಮುತ್ತರಾಯನಗರ ಮುಖ್ಯ ರಸ್ತೆಯಲ್ಲಿ ಬಿದ್ದಿರುವ ಕಸದ ರಾಶಿ   

ರಾಜರಾಜೇಶ್ವರಿ ನಗರ: ಮನೆ, ಅಪಾರ್ಟ್‌ಮೆಂಟ್ ನಿವಾಸಿಗಳು ತ್ಯಾಜ್ಯ, ಮಿಕ್ಕಿದ ಆಹಾರ, ಹಳಸಿದ ಆಹಾರವನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ರಸ್ತೆ ಬದಿ, ಬಸ್ ತಂಗುದಾಣಗಳಲ್ಲಿ ಎಸೆಯುತ್ತಿದ್ದಾರೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಜ್ಞಾನಭಾರತಿ ವಾರ್ಡ್‌ನ ಮುತ್ತುರಾಯ ನಗರ, ಅರಣ್ಯ ಇಲಾಖೆ, ನೌಕರರ ಬಡಾವಣೆ ಶಾಲಾ, ಕಾಲೇಜು, ಬಸ್‌ ತಂಗುದಾಣ, ವಸತಿ ಪ್ರದೇಶಗಳಲ್ಲಿ ಕಸದ ರಾಶಿ ಬಿದ್ದಿದೆ. ನಗರ ಪಾಲಿಕೆ ವತಿಯಿಂದ ಮನೆ, ವಸತಿ ಸಮುಚ್ಛಯ, ಪಿ.ಜಿ. ಹೋಟೆಲ್‌ಗಳಲ್ಲಿ ಸರಿಯಾಗಿ ಕಸ ಸಂಗ್ರಹಣೆ ಮಾಡದಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ಸ್ಥಳೀಯರು ದೂರಿದರು.

ಕಸವನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿ ಎಸೆಯುವುದರಿಂದ ಹಸುಗಳು, ಬೀದಿ ನಾಯಿಗಳು, ಕಸದ ರಾಶಿಯಲ್ಲೆ ಇರುತ್ತವೆ. ಹಸುಗಳು ಪ್ಲಾಸ್ಟಿಕ್‌ ಸಮೇತ ಆಹಾರ ತಿನ್ನುತ್ತಿವೆ. ಬೀದಿ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಮೇಲೆ ಎಗರುತ್ತಿವೆ. ಪಾದಚಾರಿ ಮಾರ್ಗದಲ್ಲಿ ತಿರುಗಾಡುವ ವೃದ್ದರು, ಮಕ್ಕಳು ಎನ್ನದೆ ವಯಸ್ಕರ ಮೇಲೆ ದಾಳಿ ಮಾಡಿ ಕಚ್ಚುತ್ತಿವೆ ಎಂದು ನಾಗರಿಕರು ಹೇಳಿದರು.

ADVERTISEMENT

‘ಕಸದ ರಾಶಿ ಕೊಳೆತು ನೊಣ, ಸೊಳ್ಳೆ ಹಾವಳಿ ಹೇಳತೀರದಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಹಾವಳಿ, ಹಗಲು ವೇಳೆಯಲ್ಲಿ ನೊಣದ ಕಾಟದಿಂದ ಜನರು ಸಂಕಷ್ಟ ಪಡುವಂತಾಗಿದೆ’ ಎಂದು ಸವಿತಾ, ಅಶೋಕ್ ದೂರಿದರು.

ನಗರ ಪಾಲಿಕೆಯ ಘನತ್ಯಾಜ್ಯ ವಿಭಾಗದ ಸಹಾಯಕ ವ್ಯವಸ್ಥಾಪಕಿ ಶಿಲ್ಪಾ ಪ್ರತಿಕ್ರಿಯಿಸಿ, ‘ನಾನು ಈ ವ್ಯಾಪ್ತಿಗೆ ಬಂದು ಕೆಲವೇ ತಿಂಗಳಾಗಿದೆ. ಸಮಸ್ಯೆಯನ್ನು ಬಗೆಹರಿಸಲು ಕ್ರಮವಹಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.