ADVERTISEMENT

ಕೊರೊನಾ ಸಂಕಷ್ಟ: ಕೈಹಿಡಿದ ಕುರಿಗಳು, ಕುಟುಂಬಕ್ಕೆ ಆಧಾರವಾದ ಮಹಿಳೆ

ಡಿ.ಜಿ.ಮಲ್ಲಿಕಾರ್ಜುನ
Published 14 ಮೇ 2020, 3:07 IST
Last Updated 14 ಮೇ 2020, 3:07 IST
ತಾವು ಸಾಕುತ್ತಿರುವ ಕುರಿಗಳೊಂದಿಗೆ ಹಿತ್ತಲಹಳ್ಳಿಯ ಎಚ್.ಸಿ.ರತ್ನಮ್ಮ
ತಾವು ಸಾಕುತ್ತಿರುವ ಕುರಿಗಳೊಂದಿಗೆ ಹಿತ್ತಲಹಳ್ಳಿಯ ಎಚ್.ಸಿ.ರತ್ನಮ್ಮ   

ಶಿಡ್ಲಘಟ್ಟ: ಕೊರೊನಾ ನನ್ನ ಗಂಡ ಮತ್ತು ಮಗನ ಕೆಲಸ ಕಿತ್ತುಕೊಂಡರೂ ನಾನು ಸಾಕುತ್ತಿದ್ದ ಕುರಿ, ಕೋಳಿ, ಹಸು ನಮ್ಮನ್ನು ಕೈ ಹಿಡಿದು ಕಾಪಾಡಿದವು ಎಂದು ಹಿತ್ತಲಹಳ್ಳಿಯ ಎಚ್.ಸಿ.ರತ್ನಮ್ಮ ಹೇಳುತ್ತಾರೆ.

ಕೊರೊನಾ ತಡೆಗಟ್ಟಲು ಮಾಡಿದ ಲಾಕ್‌ಡೌನ್ ನಿಂದಾಗಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಂಡು ತಮ್ಮ ಗ್ರಾಮಗಳಿಗೆ ಹಿಂದಿರುಗಿದರು. ಹಿತ್ತಲಹಳ್ಳಿಯ ಶಿವಣ್ಣ ಮತ್ತು ಅವರ ಮಗ ಹೊಸಕೋಟೆಯ ಬಳಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಉದ್ಯೋಗವನ್ನು ಕಳೆದುಕೊಂಡರು. ಮುಂದೇನು ಮಾಡುವುದು ಎಂದು ಚಿಂತಿತರಾದಾಗ ಅವರ ಮಡದಿ ರತ್ನಮ್ಮ ತಾವು ಸಾಕುತ್ತಿರುವ ಕುರಿಗಳೆಡೆಗೆ ಕೈತೋರಿ, ಧೈರ್ಯ ತುಂಬಿದರು.

ಕಳೆದ ಜನವರಿ ತಿಂಗಳಿನಲ್ಲಿ ನಮ್ಮ ಗ್ರಾಮದ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಬಳಿ ಮೂರು ಕುರಿಮರಿಗಳನ್ನು ತಲಾ ₹6,000ದಂತೆ ಒಟ್ಟು ₹ 18 ಸಾವಿರ ಕೊಟ್ಟು ಕೊಂಡುಕೊಂಡೆ. ಎರಡೂವರೆ ತಿಂಗಳು ಅವುಗಳನ್ನು ಸಾಕಿ ಆ ಮೂರು ಕುರಿಗಳನ್ನು 38,500 ರೂಗಳಿಗೆ ಮಾರಿದೆ. ಕೇವಲ ಎರಡೂವರೆ ತಿಂಗಳಿಗೇ ಶೇಕಡ ನೂರಕ್ಕೂ ಹೆಚ್ಚು ಲಾಭ ಬಂತು ಎಂದರು ರತ್ನಮ್ಮ.

ADVERTISEMENT

ಈಗ ನನ್ನ ಬಳಿ ಆರು ಕುರಿಗಳು, ಒಂದು ಹಸು ಮತ್ತು ಕೋಳಿಗಳಿವೆ. ನನ್ನ ಗಂಡ ಮತ್ತು ಮಗನಿಗೆ ಮುಂದೆ ಎಲ್ಲೂ ಕೆಲಸಕ್ಕೆ ಹೋಗಬೇಡಿ. ಕುರಿಗಳು ಮತ್ತು ಹಸುಗಳು ನಮ್ಮನ್ನು ಕಾಪಾಡುತ್ತವೆ. ಅವನ್ನೇ ಸಾಕೋಣವೆಂದು ಹೇಳಿದ್ದೇನೆ ಎಂದು ರತ್ನಮ್ಮ ವಿವರಿಸಿದರು.

**
ಕುರಿಗಳು ಎ.ಟಿ.ಎಂ. ಇದ್ದಂತೆ
ಕುರಿಗಳು ಎ.ಟಿ.ಎಂ ಇದ್ದಂತೆ. ರೈತನಿಗೆ ಕಷ್ಟ ಬಂದಾಗ ಮಾರಿ ಹಣ ಪಡೆಯಬಹುದು. ಯಾವ ಉದ್ಯೋಗದಲ್ಲೂ ಎರಡೂವರೆ ತಿಂಗಳಿನಲ್ಲಿ ಹಣ ದ್ವಿಗುಣ ಮಾಡಲಾಗದು. ಅಂತಹ ಕುರಿಗಳನ್ನು ಸಾಕಿ ಮಾರಿ ರತ್ನಮ್ಮ ಲಾಭ ಸಂಪಾದಿಸಿರುವುದಲ್ಲದೆ, ಕುಟುಂಬಕ್ಕೆ ಆಸರೆಯಾಗಿದ್ದಾರೆ, ಇತರ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
–ಎಚ್.ಜಿ.ಗೋಪಾಲಗೌಡ, ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.