ADVERTISEMENT

ಚಿತ್ರದುರ್ಗ ಕಲ್ಲಿನಕೋಟೆ: ಪ್ರವಾಸಿಗರ ಸಂಖ್ಯೆ ತೀವ್ರ ಕುಸಿತ

ಕಿಷ್ಕಿಂದೆಯಂತಹ ರಸ್ತೆ ದಾಟಿ ಕೋಟೆಗೆ ಬರುವವರು ಯಾರು? ವಾಹನ ನಿಲ್ಲಿಸಲು ಜಾಗ ಎಲ್ಲಿದೆ?

ಎಂ.ಎನ್.ಯೋಗೇಶ್‌
Published 3 ಜನವರಿ 2026, 7:13 IST
Last Updated 3 ಜನವರಿ 2026, 7:13 IST
ಹೊಸ ವರ್ಷದ ದಿನ ಕಲ್ಲಿನಕೋಟೆಗೆ ಪ್ರವಾಸಿಗರು ಭೇಟಿ ನೀಡಿರುವುದು
ಹೊಸ ವರ್ಷದ ದಿನ ಕಲ್ಲಿನಕೋಟೆಗೆ ಪ್ರವಾಸಿಗರು ಭೇಟಿ ನೀಡಿರುವುದು   

ಚಿತ್ರದುರ್ಗ: ವರ್ಷಾಂತ್ಯದಲ್ಲಿ ರಾಜ್ಯ, ಹೊರರಾಜ್ಯ, ವಿದೇಶಗಳ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ನಗರದ ಐತಿಹಾಸಕ ಕಲ್ಲಿನಕೋಟೆ ಈ ವರ್ಷ ಪ್ರವಾಸಿಗರ ಕೊರತೆ ಎದುರಿಸಿದೆ. ಹೊಸ ವರ್ಷದ ದಿನವೂ ಕೋಟೆಗೆ ಭೇಟಿ ನೀಡಿದ ಜನರ ಸಂಖ್ಯೆಯಲ್ಲಿ ತೀವ್ರ ಕುಸಿತ ಉಂಟಾಗಿದೆ.

ಡಿಸೆಂಬರ್‌ ತಿಂಗಳಿಂದ ಜನವರಿ ಆರಂಭದವರೆಗೂ ಕಲ್ಲಿನಕೋಟೆ ವೀಕ್ಷಿಸಲು ಪ್ರವಾಸಿಗರು ಹರಿದು ಬರುತ್ತಿದ್ದರು. ಆದರೆ ಈ ಬಾರಿ ಆಶ್ಚರ್ಯಕರ ರೀತಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತ ಕಂಡಿರುವುದು ಭಾರತೀಯ ಪುರಾತತ್ವ ಸರ್ವೇಕ್ಷಣಾ (ಎಎಸ್‌ಐ) ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ. ಡಿಸೆಂಬರ್‌ ತಿಂಗಳಿಡೀ ಬಂದ ‍ಪ್ರವಾಸಿಗರ ಸಂಖ್ಯೆ 48,000ಕ್ಕೆ ಮೀರಿಲ್ಲ. ಇದು ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ.

ಪ್ರತಿ ಜ. 1ರಂದು ಕಲ್ಲಿನಕೋಟೆಗೆ ಅಪಾರ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಜನರನ್ನು ನಿರ್ವಹಿಸಲು ಕೋಟೆಯ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ ಹಾಕಲಾಗುತ್ತಿತ್ತು. ಸಾಲಾಗಿ ಬಂದು ಟಿಕೆಟ್‌ ಖರೀದಿಸಲು ಅನುಕೂಲವಾಗುವಂತೆ ಸಾಲುಗಂಬಗಳನ್ನು ನೆಟ್ಟು ಪ್ರವಾಸಿಗರನ್ನು ನಿರ್ವಹಿಸಲಾಗುತ್ತಿತ್ತು. ಸುರಕ್ಷತೆಗಾಗಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುತ್ತಿತ್ತು.

ADVERTISEMENT

ಈ ಬಾರಿಯೂ ಎಎಸ್‌ಐ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬಾರದಿರುವುದು ಸಿಬ್ಬಂದಿಯಲ್ಲಿ ಅನುಮಾನ ಮೂಡಿಸಿದೆ. ಹಿಂದಿನ ಹಲವು ವರ್ಷಗಳಲ್ಲಿ ಜ. 1ರಂದು ಪ್ರವಾಸಿಗರ ಸಂಖ್ಯೆ 25,000 ದಾಟುತ್ತಿತ್ತು. ಆದರೆ ಈ ಬಾರಿ ಹೊಸ ವರ್ಷದಂದು 4,850 ಮಂದಿ ಮಾತ್ರ ಭೇಟಿ ನೀಡಿದ್ದರು ಎಂದು ಎಎಸ್‌ಐ ಮೂಲಗಳು ತಿಳಿಸಿದವು.

‘ಇತ್ತೀಚಿನ ದಿನಗಳಲ್ಲಿ ‘ಕಲ್ಲಿನಕೋಟೆ’ ಕೋಟೆಯಾಗಿ ಉಳಿದಿಲ್ಲ, ಅರಣ್ಯ ರೂಪ ಪಡೆದುಕೊಂಡಿದೆ. ಗಿಡಗಂಟಿಯೊಳಗೆ ಸ್ಮಾರಕಗಳು ಮುಳುಗಿ ಹೋಗುತ್ತಿವೆ. ಜೊತೆಗೆ ಕೋಟೆ ಆವರಣದಲ್ಲಿ ಮೂಲ ಸೌಲಭ್ಯಗಳು ಇಲ್ಲವಾಗಿವೆ. ಹೀಗಾಗಿ ಕೋಟೆಗೆ ಭೇಟಿ ನೀಡುವವರ ಸಂಖ್ಯೆ ಕುಸಿಯುತ್ತಿದೆ’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ರಸ್ತೆ, ಪಾರ್ಕಿಂಗ್‌ ಕೊರತೆ: ಕೋಟೆಗೆ ಪ್ರವಾಸಿಗರ ಸಂಖ್ಯೆ ಕುಸಿಯಲು ಹಲವು ಕಾರಣಗಳಿವೆ. ಪ್ರಮುಖವಾಗಿ ನಗರದಿಂದ ಕಲ್ಲಿನಕೋಟೆಗೆ ಸಮರ್ಪಕ ರಸ್ತೆಯೇ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ. ನಗರದ ಮದಕರಿ ವೃತ್ತ ಹಾಗೂ ಗಾಂಧಿ ವೃತ್ತದಿಂದ ಕೋಟೆಗೆ ಬರಲು 2 ಮಾರ್ಗಗಳಿವೆ. ಆದರೆ ಕೋಟೆಗೆ ತೆರಳುವ ಬಗ್ಗೆ ಸೂಚನಾ ಫಲಕಗಳೇ ಇಲ್ಲ. ಎರಡೂ ರಸ್ತೆಗಳು ಕಿರಿದಾಗಿರುವ ಕಾರಣ ದೊಡ್ಡ ವಾಹನಗಳು ಬರಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ.

ಇರುವ 2 ರಸ್ತೆಗಳು ಕೂಡ ಹಾಳಾಗಿದ್ದು, ಕೋಟೆವರೆಗೆ ತಲುಪಲು ಹರಸಾಹಸ ಪಡಬೇಕಾಗಿದೆ. ವಿವಿಧ ಬಡಾವಣೆ, ಕೊಳೆಗೇರಿಗಳ ಸಣ್ಣ ರಸ್ತೆಗಳನ್ನು ದಾಟಿ ಕೋಟೆ ತಲುಪಲು ಪ್ರವಾಸಿಗರು ನಿಟ್ಟುಸಿರು ಬಿಡಬೇಕಾಗಿದೆ. ಜೊತೆಗೆ ಸ್ಥಳೀಯರು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿರುವ ಕಾರಣ ಸಂಚಾರ ದಟ್ಟಣೆಯು ಪ್ರವಾಸಿಗರನ್ನು ಕಾಡುತ್ತದೆ. ಹೀಗಾಗಿ ಪ್ರವಾಸಿಗರು ಕೋಟೆಗೆ ಬರಲು ಹಿಂದೇಟು ಹಾಕುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಪಾರ್ಕಿಂಗ್‌ ಸ್ಥಳದ ಕೊರತೆ: ಕೋಟೆ ಬಳಿ ಬಂದರೂ ಪ್ರವಾಸಿಗರ ವಾಹನ ನಿಲ್ಲಿಸಲು ಪಾರ್ಕಿಂಗ್‌ ಸ್ಥಳದ ಕೊರತೆ ಇದೆ. ಕೋಟೆ ಮುಂದಿನ ರಸ್ತೆಯನ್ನು ಅಂಗಡಿಗಳು, ಶಾಲೆ, ಕಾಲೇಜುಗಳ ಕಾಂಪೌಂಡ್‌ಗಳು ಆವರಿಸಿಕೊಂಡಿವೆ. ಸಣ್ಣ ಜಾಗದಲ್ಲಿ ವಾಹನ ಓಡಾಡುವುದರ ಜೊತೆಗೆ ವಾಹನ ನಿಲ್ಲಿಸುವುದು ಸಮಸ್ಯೆಯಾಗಿದೆ. ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆಯುವ ಘಟನೆಗಳು ಸಾಮಾನ್ಯವಾಗಿದೆ.

‘ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳಿಗೆ ಸುರಕ್ಷತೆಯೂ ಇಲ್ಲ, ಕಳ್ಳಕಾರಕ ಭಯವೂ ಕಾಡುತ್ತದೆ. ಇತ್ತೀಚೆಗೆ ಬಹುತೇಕ ಜನರು ದುಬಾರಿ ಕಾರುಗಳನ್ನೇ ಬಳಸುತ್ತಾರೆ. ವಾಹನಗಳಿಗೆ ಭದ್ರತೆ ಇಲ್ಲದ ಕಾರಣ ಪ್ರವಾಸಿಗರು ಕೋಟೆಗೆ ಬರಲು ಹಿಂದೇಟು ಹಾಕುತ್ತಾರೆ’ ಎಂದು ಪ್ರವಾಸಿಗರಾದ ಎಸ್‌.ಲಿಂಗರಾಜು, ಶಿವರುದ್ರಪ್ಪ ಹೇಳಿದರು.

ವಿದೇಶಿ ಪ್ರವಾಸಿಗರು ಭೇಟಿ ನೀಡಿರುವುದು

ಒಂದೊಳ್ಳೆ ಹೋಟೆಲ್‌ ಇಲ್ಲ...

‘ಕಲ್ಲಿನಕೋಟೆ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದರೂ ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಸುಸಜ್ಜಿತವಾದ ಹೋಟೆಲ್‌ ಇಲ್ಲದಿರುವುದೂ ಪ್ರವಾಸಿಗರ ಸಂಖ್ಯೆ ಕುಸಿಯಲು ಕಾರಣವಾಗಿದೆ. ನಗರದ ಬಹುತೇಕ ಹೋಟೆಲ್‌ಗಳಲ್ಲಿ ಸುರಕ್ಷತೆ ಇಲ್ಲ. ‍ಪ್ರತಿ ಹೋಟೆಲ್‌ನಲ್ಲೂ ಬಾರ್‌ಗಳು ತಲೆ ಎತ್ತಿವೆ. ಬಹುತೇಕ ಹೋಟೆಲ್‌ಗಳು ಅನಧಿಕೃತ ಕ್ಲಬ್‌ಗಳಾಗಿವೆ. ಲಾಡ್ಜ್‌ಗಳಲ್ಲಿ ಅನೈತಿಕ ಚಟುವಟಿಕೆಗಳು ಮಿತಿಮೀರಿವೆ. ಹೀಗಾಗಿ ದುರ್ಗದ ಹೋಟೆಲ್‌ಗಳಲ್ಲಿ ಪ್ರವಾಸಿಗರು ಬಂದು ತಂಗಲು ಹಿಂದೇಟು ಹಾಕುತ್ತಾರೆ’ ಎಂದು ಸ್ಥಳೀಯ ಹೋಟೆಲ್‌ ಕಾರ್ಮಿಕರೊಬ್ಬರು ತಿಳಿಸಿದರು.

ಮತ್ತೆ ಕುಡಿಯುವ ನೀರಿನ ಸಮಸ್ಯೆ

ಕಲ್ಲಿನಕೋಟೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗುತ್ತಿದೆ. ಎರಡು ವಾರಗಳ ಹಿಂದಷ್ಟೇ ಕೋಟೆಗೆ ನೀರು ಪೂರೈಕೆ ಸ್ಥಗಿತಗೊಂಡು ಪ್ರವಾಸಿಗರು ಸಮಸ್ಯೆ ಅನುಭವಿಸಿದ್ದರು. ಮೋಟಾರ್‌ ಕೆಟ್ಟಿದ್ದ ಕಾರಣ ಕೋಟೆಗೆ ಭೇಟಿ ನೀಡುವ ಶಾಲಾ ವಿದ್ಯಾರ್ಥಿಗಳೂ ತೊಂದರೆ ಅನುಭವಿಸಿದ್ದರು. ಈಗ ಮತ್ತೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಪ್ರವಾಸಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ಕೋಟೆಗೆ ಪ್ರವಾಸಿಗರ ಸಂಖ್ಯೆ ಕುಸಿಯಲು ಇದೂ ಕಾರಣವಾಗಿದೆ.

ಪ್ರವಾಸಿಗರನ್ನು ನಿರ್ವಹಿಸಲು ನಾವು ಸಕಲ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರು ಕೋಟೆಗೆ ಬಂದಿಲ್ಲ. ಅದಕ್ಕೆ ಏನು ಕಾರಣ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುವುದು
–ಹರೀಶ್‌ ರಾಮ್‌, ಹಿರಿಯ ಸಹಾಯಕ ಸಂರಕ್ಷಣಾಧಿಕಾರಿ ಎಎಸ್‌ಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.