ADVERTISEMENT

ಸಂತೇಬೆನ್ನೂರು: ಸರ್ಕಾರಿ ಶಾಲೆಯಲ್ಲಿ ಗ್ರಾಮಸ್ಥರಿಂದಲೇ ಎಲ್‌ಕೆಜಿ, ಯುಕೆಜಿ

ಮೆದಿಕೆರೆ: ಹಳೆಯ ವಿದ್ಯಾರ್ಥಿಗಳ ಆರ್ಥಿಕ ನೆರವು

ಕೆ.ಎಸ್.ವೀರೇಶ್ ಪ್ರಸಾದ್
Published 5 ಜುಲೈ 2025, 6:24 IST
Last Updated 5 ಜುಲೈ 2025, 6:24 IST
ಸಂತೇಬೆನ್ನೂರು ಸಮೀಪದ ಮೆದಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗಿರುವ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಲ್ಲಿ ಪಾಠ ಆಲಿಸುತ್ತಿರುವ ಚಿಣ್ಣರು
ಸಂತೇಬೆನ್ನೂರು ಸಮೀಪದ ಮೆದಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರಂಭವಾಗಿರುವ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಲ್ಲಿ ಪಾಠ ಆಲಿಸುತ್ತಿರುವ ಚಿಣ್ಣರು   

ಸಂತೇಬೆನ್ನೂರು: ಸಮೀಪದ ಮೆದಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಗ್ರಾಮಸ್ಥರ ಸಂಪೂರ್ಣ ಸಹಕಾರದಿಂದಲೇ ಎಲ್‌ಕೆಜಿ ಹಾಗೂ ಯುಕೆಜಿ (ಪೂರ್ವಪ್ರಾಥಮಿಕ) ತರಗತಿಗಳನ್ನು ಆರಂಭಿಸಲಾಗಿದೆ.

ಎಲ್‌ಕೆಜಿಗೆ 15 ಹಾಗೂ ಯುಕೆಜಿಗೆ 10 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳಿಗಾಗಿ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ನೀಡಿದ ದೇಣಿಗೆ ಮೊತ್ತದಲ್ಲೇ ಶಿಕ್ಷಕರನ್ನು ನೇಮಿಸಿಕೊಂಡು ವೇತನ ನೀಡಲಾಗುತ್ತಿದೆ.  

ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ಸಾಮಗ್ರಿಗಳನ್ನೂ ವಿತರಿಸಲಾಗಿದೆ. ಮಕ್ಕಳಿಗೆ ಅಕ್ಷರಾಭ್ಯಾಸ, ಚಟುವಟಿಕೆ ಮೂಲಕ ಕಲಿಕೆ, ಕಥೆಗಳ ಮೂಲಕ ನೈತಿಕ ಶಿಕ್ಷಣ ನೀಡಲು ಸೃಜನಾತ್ಮಕ ಬೋಧನಾ ವಿಧಾನ ಅನುಸರಿಸಲಾಗುತ್ತಿದೆ.

ADVERTISEMENT

ಶಾಲೆಯಲ್ಲಿ ಈಚೆಗೆ ಉದ್ಘಾಟನೆಗೊಂಡ ನೂತನ ಕಟ್ಟಡವು ವಿಶಾಲವಾದ ಕೊಠಡಿಗಳನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳು ಶಾಲಾ ಕಟ್ಟಡಕ್ಕೆ ವರ್ಣರಂಜಿತ ಚಿತ್ತಾರಗಳನ್ನು ಬಿಡಿಸುವ ಮೂಲಕ ಆಕರ್ಷಣೆಯನ್ನು ಇಮ್ಮಡಿಗೊಳಿಸಿದ್ದಾರೆ. ಈ ಬಾರಿ 1ರಿಂದ 7ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಿದೆ ಎನ್ನುತ್ತಾರೆ ಮುಖ್ಯಶಿಕ್ಷಕ ಶಂಕರ ನಾಯ್ಕ.

ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ ಹಾಗೂ ಗ್ರಾಮ ಪಂಚಾಯಿತಿ ನೀಡಿದ ಹಣದಲ್ಲಿ ಶಿಕ್ಷಕಿ ಹಾಗೂ ಸಹಾಯಕಿಯನ್ನು ನೇಮಿಸಿಕೊಳ್ಳಲಾಗಿದೆ. ವೇತನ ಕೊರತೆ ಉಂಟಾದರೆ ಹಿರಿಯ ವಿದ್ಯಾರ್ಥಿಗಳು ಸಹಕರಿಸಲು ಸಿದ್ಧರಿದ್ದಾರೆ. ಒಂದು ವರ್ಷ ನಿರ್ವಹಣೆ ಮಾಡಿದರೆ ಸರ್ಕಾರದಿಂದ ಶಿಕ್ಷಕರನ್ನು ನೇಮಿಸುವ ಭರವಸೆ ದೊರೆಯಲಿದೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ರೇವಣ ಸಿದ್ದಪ್ಪ ಹಾಗೂ ಶಿಕ್ಷಣಪ್ರೇಮಿ ರಾಜಶೇಖರ್. 

2025-26ನೇ ಸಾಲಿನಲ್ಲಿ ಮೆದಿಕೆರೆ ಸೇರಿದಂತೆ ಚನ್ನಗಿರಿ ತಾಲ್ಲೂಕಿನ 25 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಆರಂಭಿಸಲಾಗುತ್ತಿದೆ. ಮೆದಿಕೆರೆ ಗ್ರಾಮಸ್ಥರು ಎಲ್‌ಕೆಜಿ ಹಾಗೂ ಯುಕೆಜಿ ಆರಂಭಿಸಿರುವುದು ಮುಂದಿನ ವರ್ಷಗಳಲ್ಲಿ ದಾಖಲಾತಿ ಹೆಚ್ಚಲು ಪೂರಕವಾಗಿದೆ. ಸರ್ಕಾರಿ ಶಾಲೆ ಉಳಿಸಲು ಗ್ರಾಮಸ್ಥರು ಹಾಗೂ ಹಿರಿಯ ವಿದ್ಯಾರ್ಥಿಗಳು ಕೈ ಜೋಡಿಸುತ್ತಿರುವುದು ಧನಾತ್ಮಕ ಬೆಳವಣಿಗೆ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ.

ದೇಣಿಗೆ ಕೊಟ್ಟಿದ್ದು ಯಾರು?

ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲು ಶಾಲೆಯ ಹಿರಿಯ ವಿದ್ಯಾರ್ಥಿಗಳು ಒಟ್ಟು ₹150000 ದೇಣಿಗೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ₹ 15000 ದೇಣಿಗೆ ನೀಡಲಾಗಿದೆ. ಬೆಂಗಳೂರಿನ ‘ರೈಡ್ ಫಾರ್ ಕಾಸ್‌’ ಸಂಸ್ಥೆಯು ಪಾಠೋಪಕರಣ ನೀಡಿದೆ.

1ರಿಂದ 7ನೇ ತರಗತಿವರೆಗೆ ನಮ್ಮೂರ ಸರ್ಕಾರಿ ಶಾಲೆಯಲ್ಲೇ ಓದಿದ್ದೆ. ಆಗ 200ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದೆವು. ಇದೀಗ ಶಾಲೆಯ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿದ್ದೇವೆ.
– ಎಂ.ಎನ್‌.ವೀರಯ್ಯ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿವೃತ್ತ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.