ಬಾಗಲಕೋಟೆ: ಮುದುಡು ರೋಗ ನಿರೋಧಕ ಶಕ್ತಿ ಹೊಂದಿರುವ ಟೊಮೆಟೊದ ನಾಲ್ಕು ಹೊಸ ತಳಿಗಳನ್ನು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದೆ.
ಮುದುಡು ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಎಲೆ ಸಣ್ಣದಿರುವಾಗ ರೋಗ ಬಂದರೆ ಗಿಡಗಳ ಬೆಳವಣಿಗೆಯು ಕುಂಠಿತವಾಗಲಿದೆ. ಜೊತೆಗೆ, ಇಳುವರಿಯೂ ಕಡಿಮೆಯಾಗುತ್ತದೆ. ಇದರಿಂದ ಖರ್ಚು ಹೆಚ್ಚಾಗಿ, ಆದಾಯ ಕಡಿಮೆಯಾಗುತ್ತದೆ.
‘ವಿಶ್ವವಿದ್ಯಾಲಯವು ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೋಗ ನಿರೋಧಕ ಶಕ್ತಿಯುಳ್ಳ ‘ಕೃಷ್ಣಪ್ರಭಾ ಶಾಲ್ಮಲಾ’, ‘ಕೃಷ್ಣಪ್ರಭಾ ಬಾರಿ’, ‘ಕೃಷ್ಣಪ್ರಭಾ ತುಂಗಾ’ ಮತ್ತು ‘ಕೃಷ್ಣಪ್ರಭಾ ಶಾಂತ’ ಎಂಬ ತಳಿಗಳನ್ನು ಅಭಿವೃದ್ಧಿಪಡಿಸಿದೆ’ ಎಂದು ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಫಕ್ರುದ್ದೀನ್ ತಿಳಿಸಿದರು.
‘ಹಲವು ಟೊಮೆಟೊ ತಳಿಗಳ ಬೀಜಗಳನ್ನು ಪ್ರತಿ ಬಾರಿ ಬೆಳೆಸಲು ಮಾರುಕಟ್ಟೆಯಲ್ಲಿ ಕೊಂಡು ತರಬೇಕು. ಆದರೆ, ಈ ತಳಿಗಳನ್ನು ಬೆಳೆದರೆ, ಮುಂದಿನ ಸಲಕ್ಕೆ ಬೀಜವಾಗಿ ಬಳಸಬಹುದು. ಬಿತ್ತನೆ ಬೀಜದ ಖರೀದಿ ವೆಚ್ಚ ಕಡಿಮೆಯಾಗುತ್ತದೆ. ರೈತರೇ ಉತ್ಪಾದಿಸಿರುವುದರಿಂದ ಗುಣಮಟ್ಟದ ಬೀಜಗಳೂ ಲಭ್ಯವಾಗುತ್ತವೆ’ ಎಂದರು.
‘ಹಲವಾರು ಹಂತಗಳ ಪರೀಕ್ಷೆಯ ನಂತರ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ, ರೈತರು ಬೆಳೆಯಲಾರಂಭಿಸಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂದು ತಿಳಿಸಿದರು.
ಹುಳಿ ಹೆಚ್ಚು: ‘ಕೃಷ್ಣಪ್ರಭಾ ಬಾರಿ’ ತಳಿಯು ಹೆಚ್ಚಿನ ಹುಳಿ ಅಂಶವನ್ನು ಹೊಂದಿದೆ. ಇದು ‘ಟೊಮೆಟೊ ಕರಿ’ ತಯಾರಿಸಲು ಹೇಳಿ ಮಾಡಿಸಿದಂತಹ ತಳಿ.
ಸಾಂಬಾರಿಗೆ ಸೂಕ್ತ: ‘ಕೃಷ್ಣಪ್ರಭಾ ತುಂಗಾ’ ತಳಿಯೂ ಸಾಂಬಾರಿನ ರುಚಿ ಹೆಚ್ಚಿಸುವ ತಳಿಯಾಗಿದೆ. ಇದು ಹೆಚ್ಚು ಇಳುವರಿ ನೀಡುತ್ತದೆ. ಪ್ರತಿ ಗಿಡಕ್ಕೆ 50 ರಿಂದ 55 ಟೊಮೆಟೊಗಳನ್ನು ಬಿಡುತ್ತದೆ.
‘ಕೃಷ್ಣಪ್ರಭಾ ಶಾಂತ’ ತಳಿಯು ಮುಂಗಾರು, ಹಿಂಗಾರು ಅವಧಿಗೂ ಸೂಕ್ತವಾಗಿದೆ. ಮಳೆಯಾಶ್ರಿತ, ನೀರಾವರಿ ಪ್ರದೇಶದಲ್ಲಿಯೂ ಇದನ್ನು ಬೆಳೆಯಬಹುದು.
ಹೊಸ ತಳಿ ಪರಿಚಯಿಸುವ ಮೂಲಕ ರೈತರ ಸಮಸ್ಯೆಗಳಿಗೆ ವಿ.ವಿಯು ಸ್ಪಂದಿಸುತ್ತಿದೆ. ಹೊಸ ತಳಿಗಳ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿದೆ.ವಿಷ್ಣುವರ್ಧನ, ಕುಲಪತಿ ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.