ADVERTISEMENT

ಎಂಎಸ್‌ಪಿ ಹೋರಾಟದ ನೇತೃತ್ವ ಸಿದ್ದರಾಮಯ್ಯ ವಹಿಸಲಿ: ಬಿ.ಆರ್‌.ಪಾಟೀಲ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 9:06 IST
Last Updated 16 ಜುಲೈ 2025, 9:06 IST
   

ಕಲಬುರಗಿ: ‘ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಗಾಗಿ ಸಿದ್ದರಾಮಯ್ಯ ಅವರು ರಾಷ್ಟ್ರಮಟ್ಟದಲ್ಲಿ ನೇತೃತ್ವ ವಹಿಸಿ ರೈತರ ಧ್ವನಿಯಾಗಬೇಕು’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ ಮನವಿ ಮಾಡಿದರು.

‘ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ 1,777 ಎಕರೆ ಜಮೀನು ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅದಾಗ್ಯೂ, ರೈತರ ಹಿತದೃಷ್ಟಿಯಿಂದ ಭೂಮಿ ಮರಳಿಸುವಂಥ ಐತಿಹಾಸಿಕ ನಿರ್ಧಾರ ನಮ್ಮ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತೆರೆ ಎಳೆದಿದೆ. ಅದಕ್ಕಾಗಿ ನಾಡಿನ ಸಮಸ್ತ ರೈತರ ಪರವಾಗಿ ನಾನು ಅಭಿನಂದಿಸುತ್ತೇನೆ’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಸಿದ್ದರಾಮಯ್ಯ ಸ್ವಂತ ಹೊಲದಲ್ಲಿ ಉಳಿಮೆ ಮಾಡಿದವರು. ರೈತರ ಸಂಕಷ್ಟ, ನೋವು ಅರಿತವರು. ಆ ಹಿನ್ನೆಲೆಯಲ್ಲಿ ಗಂಭೀರವಾಗಿ ಯೋಚಿಸಿ ಭೂಸ್ವಾಧೀನ ರದ್ದುಗೊಳಿಸಿದ್ದಾರೆ. ಅದರಂತೆ, ಎಂಎಸ್‌ಪಿ ಕಾಯ್ದೆ ಜಾರಿಗೂ ನೇತೃತ್ವ ವಹಿಸಬೇಕು. ರಾಷ್ಟ್ರದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಅಂತಿಮ ಹೋರಾಟ ಆರಂಭಿಸಬೇಕು’ ಎಂದು ಕೋರಿದರು.

ADVERTISEMENT

‘ಈ ಹಿಂದೆ ಬಿಜೆಪಿ ಸರ್ಕಾರ ದೇವನಹಳ್ಳಿ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. ಅದಕ್ಕೆ ರೈತರ ವಿರೋಧ ವ್ಯಕ್ತವಾಗಿತ್ತು. ಆಗ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಅವರನ್ನು ನಾನೇ ಹೋರಾಟಕ್ಕೆ ಕರೆದುಕೊಂಡು ಹೋಗಿದ್ದೆ. ರೈತರ ಹೋರಾಟಕ್ಕೆ ಬೆಂಬಲ ಕೊಟ್ಟು ಬಂದಿದ್ದೆವು. ಆಗ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ರೈತರಿಗೆ ಸಂಕಷ್ಟಕ್ಕೆ ಸ್ಪಂದಿಸಿ, ಭೂಮಿ ಮರಳಿಸಿದ್ದಾರೆ’ ಎಂದರು.

‘ಜಿಲ್ಲೆಯ ಹೊನ್ನಕಿರಣಗಿ, ಫರಹತಾಬಾದ್, ತಾವಗೇರಾ ಪ್ರದೇಶದಲ್ಲಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಇದ್ದಾಗ 1,500 ಜಮೀನು ಸ್ವಾಧೀನಪಡಿಸಿಕೊಂಡಿತ್ತು. 15 ವರ್ಷಗಳಾದರೂ ಒಂದೂ ಉದ್ದಿಮೆ ಬಂದಿಲ್ಲ. ಜೇವರ್ಗಿಯ ಫುಡ್‌ಪಾರ್ಕ್‌ ಯೋಜನೆಯೂ ಯಶಸ್ವಿಯಾಗಿಲ್ಲ. ಮತ್ತೊಂದೆಡೆ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಗೂ ಸಿದ್ಧತೆ ನಡೆದಿದೆ. ಅದೂ ಯಶಸ್ವಿಯಾಗಲ್ಲ ಎಂಬುದು ನನ್ನ ಅನುಭವ’ ಎಂದು ಬಿ.ಆರ್‌.ಪಾಟೀಲ ಹೇಳಿದರು.

‘ಹಿಂದೆ ಸ್ವಾಧೀನ ಪಡಿಸಿಕೊಂಡ 1500 ಎಕರೆ ಜಮೀನಿನಲ್ಲಿ ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ಚಿಂತನೆ ನಡೆದಿದೆ. ಸೋಲಾರ್‌ ಪಾರ್ಕ್‌ಗೆ ಫಲವತ್ತಾದ ಕೃಷಿ ಜಮೀನು ಯಾಕೆ ಬೇಕು? ಹೊನ್ನಕಿರಣಗಿ ಹೆಸರು ಬಂದಿದ್ದೇ ಅಲ್ಲಿ ಸಮೃದ್ಧವಾಗಿ ಬೆಳೆದ ಜೋಳದಿಂದ. ಹೀಗಾಗಿ ಅಂಥ ನೆಲದಲ್ಲಿ ಸೋಲಾರ್‌ ಪಾರ್ಕ್‌ ಬೇಡ. ‍ಜಮೀನು ಬೇಕಿದ್ದರೆ ನಾನೇ ಆಳಂದ ತಾಲ್ಲೂಕಿನಲ್ಲಿ ಕೊಡುತ್ತೇನೆ’ ಎಂದು ಆಳಂದ ಶಾಸಕರೂ ಆಗಿರುವ ಬಿ.ಆರ್‌.ಪಾಟೀಲ ಹೇಳಿದರು.

‘ಕೃಷಿ ಕಾಲೇಜೋ, ಕೃಷಿ ವಿವಿಯೋ ಸ್ಥಾಪಿಸಿ’

‘ಉಳ್ಳವರ ಕಣ್ಣು ಭೂಮಿ ಮೇಲೆ ಬಿದ್ದಿದ್ದು, ಭೂಮಿ ಕಬಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಈ ಷಡ್ಯಂತ್ರಕ್ಕೆ ನಮ್ಮ ಸರ್ಕಾರ ಒಳಗಾಗುವುದು ಬೇಡ. ಜಿಲ್ಲೆಯಲ್ಲಿ ಸ್ವಾಧೀನಕ್ಕೆ ಪಡೆದ 1,500 ಎಕರೆ ಜಮೀನಿನಲ್ಲಿ ಸೋಲಾರ್ ಪಾರ್ಕ್‌ ಬದಲು ಸರ್ಕಾರ ಕೃಷಿ ಕಾಲೇಜೋ, ಕೃಷಿ ವಿಶ್ವವಿದ್ಯಾಲಯವನ್ನೋ ಸ್ಥಾಪಿಸಬೇಕು. ತೊಗರಿ ಬೆಳೆ ಪ್ರದೇಶ ವಿಸ್ತರಣೆಯಾಗಿದೆ. ಬೀದರ್‌, ಬೆಳಗಾವಿ, ವಿಜಯಪುರ, ರಾಯಚೂರು, ಚಿತ್ರದುರ್ಗದ ತನಕ ತೊಗರಿ ಬೆಳೆಯಲಾಗುತ್ತಿದೆ. ಬೇಳೆಕಾಳು, ಎಣ್ಣೆಕಾಳು ಈಗಲೂ ನಮ್ಮ ದೇಶ ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ಹೊಸ ಹೊಸ ತಳಿಗಳನ್ನು ಸಂಶೋಧಿಸಿ ರೈತರಿಗೆ ಕೊಟ್ಟರೆ, ಸಮೃದ್ಧವಾಗಿ ಧಾನ್ಯಗಳನ್ನು ಬೆಳೆದು, ಆಮದು ನಿಲ್ಲಿಸಬಹುದು’ ಎಂದು ಬಿ.ಆರ್‌.ಪಾಟೀಲ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.