ADVERTISEMENT

ಮೈಸೂರು | ‘‌ಬೇರ್‌ಫೂಟ್ ಟೆಕ್ನೀಷಿಯನ್‌‌’: ಕಾದಿರುವ ಆಕಾಂಕ್ಷಿಗಳು

ಕಳೆದ ವರ್ಷವೇ ಅರ್ಜಿ ಆಹ್ವಾನಿಸಿದರೂ ನಡೆಯದ ಪರೀಕ್ಷೆ

ಎಂ.ಮಹೇಶ್
Published 2 ಜೂನ್ 2025, 23:30 IST
Last Updated 2 ಜೂನ್ 2025, 23:30 IST
ಮ–ನರೇಗಾ
ಮ–ನರೇಗಾ   

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ–ನರೇಗಾ) ಯೋಜನೆಯಡಿ ಮಂಜೂರಾದ ಬಿಎಫ್‌ಟಿ (ಬೇರ್‌ಫೂಟ್ ಟೆಕ್ನೀಷಿಯನ್‌)ಗಳ ಹುದ್ದೆಗಳ ಭರ್ತಿ ಪ್ರಕ್ರಿಯೆ ಒಂದೂವರೆ ವರ್ಷವಾದರೂ ನಡೆಯದೆ ಆಕಾಂಕ್ಷಿಗಳು ಚಾತಕ‍ಪಕ್ಷಿಗಳಂತೆ ಕಾಯುತ್ತಿದ್ದಾರೆ.

ರಾಜ್ಯದ 5,962 ಗ್ರಾಮ ಪಂಚಾಯಿತಿಗಳಲ್ಲಿ 1,790 ಬಿಎಫ್‌ಟಿ ಹುದ್ದೆಗಳ ಭರ್ತಿಗೆ 2024ರ ಜನವರಿಯಲ್ಲೇ ಆಯಾ ಜಿಲ್ಲಾ ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಲು ಜ.16 ಕೊನೆಯ ದಿನವಾಗಿತ್ತು. ಆದರೆ, ಅಂದಿನಿಂದ ಇಲ್ಲಿವರೆಗೂ ಲಿಖಿತ ಪರೀಕ್ಷೆಯೇ ನಡೆದಿಲ್ಲ. 

ಮೈಸೂರು ಜಿಲ್ಲೆಗೆ 64 ಬಿಎಫ್‌ಟಿ ಹುದ್ದೆಗಳು ಮಂಜೂರಾಗಿದ್ದು, 46 ಮಂದಿ ವಿವಿಧ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ 18 ಹುದ್ದೆಗಳು ಖಾಲಿ ಇವೆ. 

ADVERTISEMENT

ಅರ್ಹತೆಗಳೇನು?:

‘ಅರ್ಜಿ ಸಲ್ಲಿಸುವವರು ನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರರಾಗಿರಬೇಕು (ಹಿಂದಿನ ಮೂರು ವರ್ಷಗಳಲ್ಲಿ ಕನಿಷ್ಠ 2 ವರ್ಷ 25 ದಿನಗಳಿಗೆ ಕಡಿಮೆ ಇಲ್ಲದಂತೆ ಕೂಲಿಕಾರರಾಗಿ ಕೆಲಸ ಮಾಡಿರಬೇಕು). 10ನೇ ತರಗತಿ ಉತ್ತೀರ್ಣರಾಗಿರಬೇಕು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಕನಿಷ್ಠ ಮೂರು ವರ್ಷಗಳು ಸಾಮಾಜಿಕ ಪರಿಶೋಧನೆಯಲ್ಲಿ ಗ್ರಾಮ ಸಂ‍ಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದವರಿಗೆ ಶೇ 20ರಷ್ಟು ಆದ್ಯತೆ ನೀಡಲಾಗುವುದು’ ಎಂದು ಪ್ರಕಟಣೆ ನೀಡಲಾಗಿತ್ತು.

‘ಅರ್ಜಿ ಸಲ್ಲಿಸಿ ಒಂದೂವರೆ ವರ್ಷವಾದರೂ ಪ್ರಕ್ರಿಯೆ ನಡೆಸಿಲ್ಲ. ಜಿಲ್ಲಾ ಪಂಚಾಯಿತಿಗೆ ಹೋಗಿ ವಿಚಾರಿಸಿದರೆ, ತಡವಾಗುತ್ತದೆ ಎನ್ನುತ್ತಿದ್ದಾರೆ. ಪರೀಕ್ಷೆ ದಿನಾಂಕವನ್ನೂ ತಿಳಿಸುತ್ತಿಲ್ಲ. ಕೆಲಸಕ್ಕಾಗಿ ಕಾಯುತ್ತಿದ್ದೇವೆ. ಸಿಕ್ಕರೆ ಅನುಕೂಲವಾಗುತ್ತದೆ. ಅರ್ಹತೆ ಎಲ್ಲವೂ ನಮಗಿದೆ. ವಿಳಂಬವಾಗುತ್ತಿರುವುದರಿಂದ ನೇಮಕಾತಿ ಆಗುತ್ತದೆಯೋ, ಇಲ್ಲವೋ ಎಂಬ ಆತಂಕವೂ ಮೂಡಿದೆ’ ಎಂದು ಆಕಾಂಕ್ಷಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಜನೆಯಡಿ ನಡೆಸುವ ಕೆಲಸಗಳ ಸ್ಥಳಗಳಿಗೆ ತೆರಳಿ ಜಿಯೊ ಟ್ಯಾಗಿಂಗ್, ಜಿಪಿಎಸ್ ಮಾಡುವುದು, ಕಾಮಗಾರಿಯ ಅಳತೆ ಮಾಡುವುದು, ಉದ್ಯೋಗಿ ಚೀಟಿ ಕೊಡಿಸಲು ನೆರವಾಗುವುದು, ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ಸಿಬ್ಬಂದಿಗೆ ನೆರವಾಗುವುದು ಬಿಎಫ್‌ಟಿಗಳ ಕೆಲಸ. ಸದ್ಯ ಹುದ್ದೆಗಳು ಭರ್ತಿಯಾಗದಿರುವುದರಿಂದ ಒಬ್ಬೊಬ್ಬ ಬಿಎಫ್‌ಟಿ ಸರಾಸರಿ ಹತ್ತು ಪಂಚಾಯಿತಿಗಳ ಹೊಣೆ ನಿಭಾಯಿಸಬೇಕಾದ ಪರಿಸ್ಥಿತಿ ಇದೆ.

‘ಕೆಲವು ಜಿಲ್ಲೆಗಳ ಪಟ್ಟಿಗಳಷ್ಟೇ ಸಲ್ಲಿಕೆಯಾಗಿದೆ. ಎಲ್ಲ ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿ ಬಂದ ಬಳಿಕ ಒಮ್ಮೆಲೇ ಪರೀಕ್ಷೆ ನಡೆಸಲಾಗುವುದು’ ಎಂದು ಎಸ್‌ಐಆರ್‌ಡಿ ಮೂಲಗಳು ತಿಳಿಸಿವೆ.

ಬಿಎಫ್‌ಟಿಗಳ ಕೆಲಸವೇನು?

‘ಕೂಲಿಕಾರರನ್ನು ಸಂಘಟಿಸಿ ಕಾಮಗಾರಿಗಳಲ್ಲಿ ತೊಡಗಿಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಲು ಮತ್ತು ಅನುಷ್ಠಾನಗೊಂಡ ಕಾಮಗಾರಿಗಳ ಕಾರ್ಯಸ್ಥಳಗಳ ಮೇಲ್ವಿಚಾರಣೆಗೆ ಬಿಎಫ್‌ಟಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ಅರ್ಹತೆಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ 1:3 ಅನುಪಾತದಲ್ಲಿ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ಮೈಸೂರಿನ ಅಬ್ದುಲ್ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಂಸ್ಥೆ (ಎಸ್‌ಐಆರ್‌ಡಿ) ಮೂಲಕ ನಡೆಸುವಂತೆ ಆದೇಶಿಸಲಾಗಿದೆ.

ಜಿಲ್ಲೆಯಲ್ಲಿ ಬಹಳ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪರಿಶೀಲಿಸಿ 54 ಅಭ್ಯರ್ಥಿಗಳ ಪಟ್ಟಿಯನ್ನು ಎಸ್‌ಐಆರ್‌ಡಿಗೆ ನಾವೇ ಮೊದಲಿಗೆ ಕಳುಹಿಸಿದ್ದೇವೆ.
–ಎಸ್.ಯುಕೇಶ್‌ಕುಮಾರ್‌, ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.