
ಸುತ್ತೂರು (ಮೈಸೂರು ಜಿಲ್ಲೆ): ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಭಾಗವಾಗಿ ಶುಕ್ರವಾರ ಇಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ 11 ಅಂತರ್ಜಾತಿ, 3 ಮರು ಮದುವೆ ಸೇರಿ 135 ಜೋಡಿಗಳು ದಾಂಪತ್ಯ ಬದುಕಿಗೆ ಕಾಲಿಟ್ಟವು.
4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 3 ಅಂಗವಿಕಲ, 5 ತಮಿಳುನಾಡಿನ ಜೋಡಿಗಳು ಮಧ್ಯಾಹ್ನ 12.10ಕ್ಕೆ ಮಂಗಳವಾದ್ಯ ಮೊಳಗುತ್ತಿದ್ದಂತೆ ಹೊಸ ಬಾಳಿಗೆ ಕಾಲಿಟ್ಟರು. ಹರುಷದ ಹೊನಲು ಹರಿದಿತ್ತು. ಸರಳ ವಿವಾಹದ ಮೌಲ್ಯವನ್ನು ಸಾರಿದ ಸಂತಸದ ಜೊತೆಗೆ ಕಣ್ಗಳು ತುಂಬಿಬಂದವು. ಕನ್ನಡ, ಮಲಯಾಳ, ತಮಿಳು ಸೇರಿ ಬಹುಭಾಷಿಕ ದಂಪತಿಗಳೂ ಇದ್ದದ್ದು, ವೈವಿಧ್ಯವನ್ನು ಸಾರಿತು.
ಚಾಮರಾಜನಗರದ ಕಾವುದವಾಡಿಯ ಟಿ.ಎನ್.ಸುದೀಪ್, ತಮಿಳುನಾಡಿನ ತಿರುಪ್ಪೂರಿನ ಬಿ.ಬೃಂದಾ ಅವರನ್ನು ಕೈಹಿಡಿದರು. ಬೃಂದಾ ಮಾತೃಭಾಷೆ ಮಲಯಾಳ, ಕೆಲಸಕ್ಕೆಂದು ಸುದೀಪ್ ತಿರುಪ್ಪೂರಿಗೆ ಹೋಗಿದ್ದಾಗ ಪ್ರೀತಿ ಮೂಡಿತ್ತು. ‘ಇಬ್ಬರ ಭಾಷೆ ಬೇರೆ. ಭಾಷೆ ಅರ್ಥವಾಗಲು ಕಷ್ಟವಾದರೂ ಪ್ರೀತಿಯ ಭಾಷೆ ಅರಿತೆವು’ ಎಂದು ಸುದೀಪ್ ನಕ್ಕರು.
ಕಲಬುರಗಿಯ ಅಫ್ಜಲ್ಪುರದ ದಣ್ಣೂರು ಗ್ರಾಮದ ಆನಂದ, ಮೈಸೂರಿನ ಹೆಬ್ಬಾಳದ ವೈಷ್ಣವಿ ಅವರನ್ನು ವರಿಸಿದರು. ಇವರದ್ದೂ ಅಂತರ್ಜಾತಿ ವಿವಾಹ. ‘5 ವರ್ಷದಿಂದ ಪ್ರೀತಿಸುತ್ತಿದ್ದೆವು. ನಾನು ಟೈಲರಿಂಗ್ ಮಾಡುತ್ತಿದ್ದೇನೆ. ಆನಂದ್ ಪೇಂಟರ್. ಮನೆಯವರನ್ನು ಒಪ್ಪಿಸಿ ಶ್ರೀಕ್ಷೇತ್ರದಲ್ಲಿ ಮದುವೆ ಆದೆವು’ ಎಂದು ನುಡಿದರು.
ಚಾಮರಾಜನಗರ ತಾಲ್ಲೂಕು ರಾಮಸಮುದ್ರದ ಮಹೇಶ್ ಮತ್ತು ಚಂದ್ರಮ್ಮ ಅವರಿಗೆ 2ನೇ ಮದುವೆ. ‘ಮೊದಲ ಪತಿ ನಿಧನರಾಗಿದ್ದರು. ಜೀವನ ನಡೆಸುವುದು ಕಷ್ಟವಿತ್ತು. ಈ ವೇಳೆ ಮಹೇಶ್ ಸಿಕ್ಕರು’ ಎಂದು ಚಂದ್ರಮ್ಮ ಹೇಳಿದರು.
ದೃಷ್ಟಿದೋಷವುಳ್ಳ ಎಚ್.ಡಿ.ಕೋಟೆ ತಾಲ್ಲೂಕಿನ ನೇರಳೆ ಗ್ರಾಮದ ರೇಖಾ, ಸರಗೂರು ತಾಲ್ಲೂಕಿನ ಹೂವಿನಕೊಳ ಗ್ರಾಮದ ಎಚ್.ಎಂ.ಸುರೇಶ, ಕೊಳ್ಳೇಗಾಲದ ಹೇಮಾವತಿ– ಹನೂರಿನ ಜಡೇಸ್ವಾಮಿ, ಚಾಮರಾಜನಗರದ ಸಾಕಮ್ಮ– ನಂಜನಗೂಡಿನ ಚಿನ್ನಸ್ವಾಮಿ ಒಬ್ಬರಿಗೊಬ್ಬರು ಆಸರೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.